ಸೇತುರಾಂ ಸರಿಸಿದ ಬದುಕಿನ ವಿಕೃತಿ – ಅನಾವರಣ….!
ರೇಷ್ಮೇ ಹುಳಾನ ಪ್ರೀತಿಯಿಂದ ಸಾಕ್ತೀವಿ. ಅದು 24 ಘಂಟೆ ತಿನ್ನತ್ತೆ. ನಿದ್ದೆಗೆಟ್ಟು ಅದರ ಹೊಟ್ಟೆಪಾಡನ್ನ ಗಮನಿಸ್ತೀವಿ.ಅದು ಬಲಿತು ಜೊಲ್ಲು ಸುರಿಸುತ್ತೆ, ಗೂಡು ಕಟ್ಟೋದಕ್ಕೆ ಅವಕಾಶ ಮಾಡಿಕೊಡ್ತೀವಿ. ಗೂಡು ಕಟ್ಟಿದ ಮೇಲೆ ಬಿಸಿನೀರಿಗಾಕಿ ಕುದಿಸಿ ದಾರ ಎಳೀತೀವಿ. ಅದನ್ನ ಸಾಕಿದ್ದೇ ಸ್ವಂತ ಲಾಭಕ್ಕಲ್ವ. ಜೀವಿ ಅಲ್ಲ ವಸ್ತು ಮುಖ್ಯ ಅಂತ ಆದ್ಮೇಲೆ, ರೇಷ್ಮೇ ಹುಳ ಏನು, ಮನುಷ್ಯ ಆದರೇನು? ಇಂತಹ ಸಂಭಾಷಣೆ ಯಾವುದಾದರೂ ಟಿ.ವಿ ಧಾರಾವಾಹಿಯಲ್ಲಿ ನೀವು ಕೇಳಿದರೆ ಥಟ್ ಎಂದು ಇದು ಸೇತುರಾಂರ ಧಾರಾವಾಹಿ ಎಂದು ಬಿಡಬಹುದು. ಇಂತಹ ಸಂಭಾಷಣೆಯನ್ನು ಕೇಳಿದ ಕೆಲವು ಮಹಿಳೆಯರು ಇನ್ಮೇಲೆ ನಾನು ರೇಷ್ಮೇ ಸೀರೆ ತೆಗೆದುಕೊಳ್ಳುವುದಿಲ್ಲ ಎಂದು ಆ ಗಳಿಗೆಯಲ್ಲಿ ಅಂದುಕೊಂಡರೆ ಆಶ್ಚರ್ಯಪಡಬೇಕಿಲ್ಲ. ಸೇತುರಾಂ ಧಾರಾವಾಹಿಯ ಸಂಭಾಷಣೆಗಳಿರುವುದೇ ಹಾಗೇ. ಕೊಂಚ ಘಾಟು, ನೇರಾನೇರಾ, ಕೆಲವೊಮ್ಮೆ ಕ್ಲಿಷ್ಠ, ಆದರೆ ಒಮ್ಮೆಲೇ ವೀಕ್ಷಕನ ಮನಸ್ಸಿಗಿಳಿದು ಚಿಂತನೆಯ ಬೀಜ ಬಿತ್ತಿಬಿಡುವ ತಾಕತ್ತು ಅದಕ್ಕಿರುತ್ತದೆ.
ಆದರೆ ಕಳೆದ ಒಂದು ವಾರದಿಂದ ಕಿರುತೆರೆಯ ಧಾರಾವಾಹಿ ವೀಕ್ಷಕರಲ್ಲಿ ಖಾಲಿತನ ಆವರಿಸಿದೆ. ಏನನ್ನೋ ಕಳೆದುಕೊಂಡ ಭಾವ ಕಾಡುತ್ತಿದೆ. ರಾತ್ರಿ 8:30 ಆಯಿತೆಂದರೆ ಒಂದು ಚಡಪಡಿಕೆ ಶುರುವಾಗಿದೆ. ಕಾರಣ ಮನರಂಜನೆಯೊಂದಿಗೆ ಚಿಂತನೆಯನ್ನೂ ಕಟ್ಟಿಕೊಡುತ್ತಿದ್ದ ಸೇತುರಾಂರ ಅನಾವರಣ ಧಾರಾವಾಹಿ ಮುಗಿದಿದೆ. ಧಾರಾವಾಹಿಗಳು ಹೇಗೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂಬ ಬಗ್ಗೆ ಒಂದು ಹಾಸ್ಯದ ಮಾತಿತೆ. ಹಾಸ್ಯ ಸಂಜೆಗಳಲ್ಲಿ ಸಾಮಾನ್ಯವಾಗಿ ಗಂಗಾವತಿ ಪ್ರಾಣೇಶ್ ಈ ಮಾತನ್ನು ಬಳಸುತ್ತಿರುತ್ತಾರೆ. ಗಂಡಸರೆಲ್ಲ ಹೊರಗೆ ಬಾರಲ್ಲಿ ಟೈಟ್ ಆದರೆ ಹೆಂಗಸರು ಮನೆಯಲ್ಲೇ ಟಿ.ವಿ ಮುಂದೆ ಟೈಟ್ ಆಗಿರ್ತಾರೆ. ಅಷ್ಟರ ಮಟ್ಟಿಗೆ ನಮ್ಮ ಟಿ.ವಿ ಧಾರಾವಾಹಿಗಳು ಹೆಂಗಸರನ್ನ ಆವರಿಸಿಕೊಂಡಿದ್ದಾವೆ. ಅದರ ಮುಂದೆ ಅವರಿಗೆ ಸಮಾಜದ ಬೇರಾವ ಕಾರ್ಯಕ್ರಮಗಳಾಗಲಿ, ಪುಸ್ತಕ, ಕಥೆ ಕಾದಂಬರಿಗಳಾಗಲಿ ರುಚಿಸುವುದಿಲ್ಲ. ಹೆಂಗಸರು ಮನೆ ಬಿಟ್ಟು ಹೊರಬಂದಿದ್ದಾರೆ ಎಂದರೆ ಒಂದೋ ಕರೆಂಟ್ ಇಲ್ಲ ಅಥವಾ ಅದು ರವಿವಾರವಾಗಿರುತ್ತದೆ ಯಾವ ಧಾರಾವಾಹಿಗಳು ಇರುವುದಿಲ್ಲ ಎಂದು. ಆ ಮಾತು ಕೊಂಚ ಉತ್ಪ್ರೇಕ್ಷೆ ಎನಿಸಿದರೂ ನಿಜ. ಟಿ.ವಿ ಧಾರಾವಾಹಿಗಳ ನೋಡುಗರಲ್ಲಿ ಬಹುಪಾಲು ಮಹಿಳೆಯರೇ ಆಗಿರುತ್ತಾರೆ. ಆದ್ದರಿಂದಲೇ ಸಾಮಾನ್ಯವಾಗಿ ಮಹಿಳೆಯರನ್ನೇ ಮನದಲ್ಲಿಟ್ಟುಕೊಂಡು ಇವು ಸಿದ್ದವಾಗಿರುತ್ತವೆ. ಹೆಂಗಸರನ್ನು ಸೆಳೆಯುವ ಅತ್ತೆ ಸೊಸೆಯ ಕಥೆ, ಒಂದಷ್ಟು ಭಾವನಾತ್ಮಕ ಸನ್ನಿವೇಷ ಇದ್ದರೆ ಟಿ.ಆರ್.ಪಿ ಹೆಚ್ಚುತ್ತದೆ ಎಂಬುದು ಬಹುಶಃ ಎಲ್ಲ ಧಾರಾವಾಹಿಗಳ ನಿರ್ದೇಶಕರಿಗೆ, ನಿರ್ಮಾಪಕರಿಗೆ ಮನವರಿಕೆಯಾಗಿ ಹೋಗಿದೆ. ಕಥೆಯಲ್ಲಿ ಸಾಂದ್ರತೆ ಇರಲಿ ಇಲ್ಲದಿರಲಿ ನೂರಾರು ಎಪಿಸೋಡುಗಳ ಧಾರಾವಾಹಿ ಸಿದ್ದವಾಗುತ್ತವೆ ಮತ್ತು ಚಾನಲ್ ಗಳು ಕೂಡ ಅವನ್ನು ಖುಷಿಯಿಂದ ಪ್ರಸಾರ ಮಾಡುತ್ತವೆ.
ಲೆಕ್ಕಾ ಹಾಕಿದರೆ ಏನಿಲ್ಲವೆಂದರೂ ಕನ್ನಡದ ಪ್ರತಿ ಚಾನಲ್ಲಿನಲ್ಲಿ ೧೦-೧೨ ಧಾರಾವಾಹಿಗಳು ಪ್ರತಿದಿನ ಪ್ರಸಾರವಾಗುತ್ತವೆ. ಮಧ್ಯಾಹ್ನದಿಂದ ಪ್ರಾರಂಭವಾಗಿ ರಾತ್ರಿ ೧೦ ರ ತನಕವೂ ಮುಂದುವರಿಯುತ್ತವೆ. ಕೆಲಸವೆಲ್ಲವೂ ಆಯಿತು, ಹೊತ್ತು ಹೋಗುತ್ತಿಲ್ಲ, ಸಮಯ ಕಳೆಯಲು ಏನಾದರೂ ಆದೀತು ಎನ್ನುವವರಿಂದಲೇ ಇವು ದುಡ್ಡುಮಾಡುತ್ತವೆ. ಆದ್ದರಿಂದಲೇ ಕೆಲವರಿಗೆ ಅದರಲ್ಲೂ ಯುವಜನಾಂಗಕ್ಕೆ ಧಾರಾವಾಹಿ ನೋಡುವುದೆಂದರೆ ಕಾಲಹರಣ ಮಾಡಿದಂತೆ, ಅವರು ಅತ್ತ ತೆಲೆಹಾಕುವುದು ಕಮ್ಮಿ. ಇನ್ನು ಹೀಗೆ ಸರಣಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ನಡವೆ ಕೂಡ ಸ್ಪರ್ಧೆ ಇರುತ್ತದೆ. ಒಂದು ಧಾರಾವಾಹಿ ಬೇರೆ ಧಾರಾವಾಹಿಗಳೊಂದಿಗಿನ ಸ್ಪರ್ಧೆಯಲ್ಲಿ ಗೆದ್ದಿತು ಎಂದು ಹೇಳಲು ಕೇವಲ ಅದರ ಟಿ.ಆರ್.ಪಿ ಮತ್ತು ಮಾರ್ಕೆಟಿಂಗ್ ನ ಮಾನದಂಡ ಸಾಕೇನೋ. ಆದರೆ ಅದೇ ಧಾರವಾಹಿ ವೀಕ್ಷಕರ ಮನಗೆದ್ದಿತು ಎನ್ನಬೇಕಾದರೆ ಅದು ಉಂಟುಮಾಡಿದ ಸಂಚಲನ, ವೀಕ್ಷಕರ ಭಾವಲೋಕದಲ್ಲಾದ ಬದಲಾವಣೆ, ಹುಟ್ಟುಹಾಕಿದ ಚರ್ಚೆ ಎಲ್ಲವೂ ಮುಖ್ಯವಾಗುತ್ತದೆ. ಎಲ್ಲೋ ಬೆರಳೆಣಿಕೆಯ ಧಾರವಾಹಿಗಳು ಮನರಂಜನೆಯ ಜೊತೆಗೆ ಮೆದುಳಿಗೆ ಒಂದಷ್ಟು ಚಿಂತನೆಯನ್ನೂ ಕೊಡುತ್ತವೆ, ಅದರಲ್ಲಿನ ಕೆಲಪಾತ್ರಗಳು ಕಾಡುತ್ತವೆ, ಸಂಭಾಷಣೆಗಳಲ್ಲಿ ಸಂದೇಶ ಅಡಕವಾಗಿರುತ್ತದೆ. ಅದರಿಂದ ನೋಡುಗರು ಬದಕನ್ನು ನೋಡುವ ರೀತಿ ಕೊಂಚವಾದರೂ ಬದಲಾಗುತ್ತದೆ. ದಿನನಿತ್ಯದ ಆ ಧಾರಾವಾಹಿ ಬದುಕಿನ ಭಾಗವೇನೋ ಎಂಬಷ್ಟು ಹತ್ತಿರವಾಗುತ್ತದೆ. ಅಂತಹ ಧಾರಾವಾಹಿಗಳು ನೆನಪಿನಲ್ಲಿ ಉಳಿಯುತ್ತವೆ. ಅಂತಹದೊಂದು ಧಾರಾವಾಹಿಯನ್ನು ಸೇತುರಾಂ ಕೊಟ್ಟಿದ್ದಾರೆ.
ಸೇತುರಾಂ ಹೊಸದೊಂದು ಧಾರಾವಾಹಿ ಮಾಡುತ್ತಾರೆ ಎಂದಾಗಿನಿಂದಲೂ ಕುತೂಹಲವಿದ್ದದ್ದು ಸತ್ಯ. ಅದಾಗಲೇ ತಮ್ಮ ವಿಶಿಷ್ಠ ಸಂಭಾಷಣೆಯ ಶೈಲಿ, ಬದುಕಿನ ವಾಸ್ತವಗಳ ಕಥಾವಸ್ತು, ಪ್ರತಿ ಪಾತ್ರಗಳೂ ರೂಪುಗೊಳ್ಳುತ್ತಾ ಹೋಗುವ ಪರಿ ಎಲ್ಲವುಗಳಿಂದ ತಮ್ಮ ಛಾಪು ಮೂಡಿಸಿದ್ದವರು ಸೇತುರಾಂ. ಅವರ ಮಂಥನ ಮತ್ತು ದಿಬ್ಬಣ ಧಾರಾವಾಹಿಗಳು ಕಿರುತೆರೆಯ ವೀಕ್ಷಕರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅನಾವರಣದಲ್ಲೂ ಸೇತುರಾಂ ತಮ್ಮತನವನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಮುಖ್ಯವಾಗಿ ಎಲ್ಲರ ಮನಸ್ಸಿನಲ್ಲೂ ಇರಬಹುದಾದ ರಾಕ್ಷಸತನವನ್ನ ತೆರೆದಿಟ್ಟಿದ್ದಾರೆ. ನಮ್ಮ ಸುತ್ತಲಿನ ಭ್ರಷ್ಠ ವ್ಯವಸ್ಥೆ, ಕುಸಿಯುತ್ತಿರುವ ಮೌಲ್ಯಗಳು, ಪೀಳಿಗೆಯ ನಡುವಿನ ಅಂತರ, ಬದಲಾಗುತ್ತಿರುವ ಬದುಕಿನ ಪರಿ ಎಲ್ಲವೂ ಅನಾವರಣದಲ್ಲಿ ತೆರೆದುಕೊಂಡಿವೆ. ಬಹುಶಃ ವೀಕ್ಷಕರಿಗೆ ಇದು ಹೆಚ್ಚು ಇಷ್ಠವಾದದ್ದು ಅಲ್ಲಿನ ಎಲ್ಲ ಪಾತ್ರಗಳು ಎಲ್ಲರ ಮನೆಯಲ್ಲಿ, ನೆರೆಹೊರೆಯಲ್ಲಿ ಇರಬಹುದಾದದ್ದು ಎಂಬ ಭಾವ ಮೂಡಿಸಿದ್ದರಿಂದೇನೋ.
ಹಣ ಖರ್ಚು ಮಾಡಿ ಪಾಸಾಗಿರೋದು, ಹಣ ಕೊಟ್ಟು ಈ ಹುದ್ದೆ ಪಡೆದಿರೋದು, ಹಣ ಹಂಚಿದಷ್ಟು ದಿನ ಈ ಹುದ್ದೆಯಲ್ಲಿರ್ತೀನಿ. ಹಣಕೊಟ್ಟರೆ ಕೆಲಸ ಆಗತ್ತೆ ಎನ್ನುವ ಅಧಿಕಾರಿ ಮಗ, ಹಣದ ಆಸೆಗೆ ಹೊಗೆ ಸೊಪ್ಪು ಬೆಳೆದು, ವೃದ್ದಪ್ಯಾದಲ್ಲಿ ಅದರ ಪಶ್ಚಾತಾಪದಲ್ಲಿ ನಿಡುಸುಯ್ಯುವ ತಂದೆ, ಕರೆಯದಿದ್ದರೂ ಮಕ್ಕಳ ಮನೆ ಸೇರಿ ಮೊಮ್ಮಕ್ಕಳೊಂದಿಗೆ ಇರುವಷ್ಟು ದಿನ ಬದುಕಬೇಕೆಂದು ಆಸೆ ಪಡುವ ತಾಯಿ. ಆ ಆಸೆಯ ಹಿಂದೆ ತನ್ನ ನಂತರ ಗಂಡನಿಗೆ ಮಕ್ಕಳು ಆಸರೆಯಾಗಲಿ ಎನ್ನುವ ಕಾಳಜಿ. ಹಣ ಮಾಡುವುದಕ್ಕೆ ಯಾವ ಹಾದಿಯನ್ನೂ ತುಳಿಯಬಹುದು ಎನ್ನುವ ತರ್ಕದ ಮತ್ತೊಬ್ಬ ಮಗ ಸೊಸೆ. ಸಾಫ್ಟ್ ವೇರ್ ಉದ್ಯಮದ ದಂಪತಿಗಳಲ್ಲಿ ಆಗುವ ವೈಮನಸ್ಯ, ಅಹಂಕಾರಕ್ಕೆ ಬಲಿಯಾಗುವ ಸಂಸಾರಗಳಿಗೆ ಉದಾಹರಣೆಯಾಗಿರುವ ಕಿರಿಮಗ. ಯೌವ್ವನದ ದುಡುಕಿಗೆ ಬಲಿಯಾಗಿ ಬದುಕು ದೂಡುವ ಒಬ್ಬಳೇ ಮಗಳು. ಇಷ್ಠರಲ್ಲಿಯೇ ಬದುಕಿನ ವಿವಿಧ ಮುಖಗಳ ಅನಾವರಣ ಮಾಡಿಸಿದ್ದಾರೆ ಸೇತುರಾಂ.
ಆದಾಯ ತೆರಿಗೆ ಅಧಿಕಾರಿಯಾಗಿದ್ದವರು ಸೇತುರಾಂ. ಇನ್ನೂ ನೆನಪಿದೆ ಅವರೊಮ್ಮೆ ನನ್ನೂರು ಮದ್ದೂರಿನ ಮಾರ್ವಾಡಿಯ ಮನೆಗೆ ಆದಾಯ ತೆರಿಗೆಯ ವಿಷಯವಾಗಿ ತನಿಖೆಗೆ ಬಂದಿದ್ದರು ಆಗ ಅವರು ಟಿ.ಎನ್ ಸೀತಾರಾಂ ರ ಮಾಯಾಮೃಗ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದರು. ಯಾವುದೋ ಒಂದೆರಡು ಧಾರಾವಾಹಿ, ಹವ್ಯಾಸಕ್ಕೆ ಅಮೆಚುರ್ ಥಿಯೇಟರ್ ನಲ್ಲಿ ನಟನೆ ಎಂದು ಇದ್ದ ಸೇತುರಾಂ 30 ವರ್ಷ ಸೇವೆ ಸಲ್ಲಿಸಿದ್ದ ಆದಾಯ ತೆರಿಗೆ ಇಲಾಖೆಗೆ ನಮಸ್ಕಾರ ಹೇಳಿ ಈ ಟಿವಿಯ ಧಾರಾವಾಹಿ ಕಾಂಟ್ರಾಕ್ಟ್ ಹಿಡಿದು ಹೊರಬಂದರು. 30 ವರ್ಷ ಆದಾಯ ತೆರಿಗೆ ಅಧಿಕಾರಿಯಾಗಿ ಎಲ್ಲರ ಕಥೆ ಕೇಳಿದೆ, ನಂತರ ಗೊತ್ತಾದ ಸತ್ಯ ಎಂದರೆ ಕಥೆ ಕೇಳಿದವರು ಅಲ್ಲೇ ಇರ್ತಾರೆ. ಕಥೆ ಹೇಳುವವರು ಬೆಳೆಯುತ್ತಿರುತ್ತಾರೆ. ಆದ್ದರಿಂದ ನಾನೂ ಕಥೆ ಹೇಳಲು ಧಾರಾವಾಹಿ ಮಾಧ್ಯಮವನ್ನ ಆಯ್ದುಕೊಂಡೆ ಎನ್ನುತ್ತಾರೆ. ಅವರ ಧಾರಾವಾಹಿಗಳಲ್ಲಿ ಬರುವ ಎಲ್ಲ ಪಾತ್ರಗಳೂ ಬದುಕಿನ ಅನುಭವದ ಮೂಸೆಯಲ್ಲಿ ಮೂಡಿದವೇ.
ಅನಾವರಣ ಧಾರಾವಾಹಿಯ ಒಂದು ಪಾತ್ರ ’ದುಡದದ್ದು ಹಂಚೋ ಮನಸ್ಸಿರತ್ತೆ, ಕೈ ಎತ್ತಿ ಕೊಡೊಕೆ ಆಗತ್ತೆ.ಕದ್ದದ್ದು ಆಗಲ್ಲ.ಪುಣ್ಯ ಹಂಚಿಕೋತಾರಂತೆ, ಪಾಪ ಗುಡ್ಡೆ ಹಾಕೋತಾರಂತೆ, ಹೊರಲಾರದ ಹೊರೆ ಅನಿಸಿದರೂ ಇಳಿಸೋಕೆ ಮನಸೇ ಬರಲ್ವಂತೆ.ಪುಣ್ಯದ್ದು ಮನುಷ್ಯರಿಗೆ ಕೊಡ್ತಾರಂತೆ, ಪಾಪದ್ದು ದೇವರಿಗೆ ಕೊಡ್ತಾರೆ ಎನ್ನುವಾಗ ಎಷ್ಟು ಸತ್ಯ ಅಲ್ವ ಅನ್ನಿಸುವುದು ದಿಟ. ಬಹುಶಃ ಸೇತುರಾಂರ ಬಹುದೊಡ್ಡ ಶಕ್ತಿ ಎಂದರೆ ಅವರ ಸಂಭಾಷಣೆ. ಪಟ್ಟ ಸುಖ ಸ್ವಂತ, ಹೆತ್ತ ಮಕ್ಕಳಲ್ಲ. ತಿಂದ ಫಲ ಸ್ವಂತ ಅದರ ಸಾರ ಸವಿ ಸ್ವಂತ, ನೆಟ್ಟ ಗಿಡ ಅಲ್ಲ. ಸಾವು ಅಂದರೆ ಉಸಿರು ನಿಲ್ಲೋದಲ್ಲ, ಸ್ವಾತಂತ್ರ್ಯ ಹರಣ ಎಂದು ಹೆಗಲ ಮೇಲಿನ ಶಲ್ಯ ಕೊಡವಿ ಎದ್ದು ಹೋಗುವ ರಾಮಕೃಷ್ಣಯ್ಯ, ವಯಸ್ಸಲ್ಲಿ ಗಂಡು ಸೋಲಬಾರದಂತೆ, ವಯಸ್ಸಾದ ಮೇಲೆ ಹೆಣ್ಣು ಸೋಲಬಾರದಂತೆ ಪ್ರಪಂಚ ಅವಮಾನಿಸಿದರೆ ಹಠ ಹುಟ್ಟುತ್ತೆ, ಶಕ್ತಿ ಇರತ್ತೆ, ಗಂಡ ಅವಮಾನಿಸಿದರೆ ಖಿನ್ನತೆ ಕಾಡತ್ತೆ, ಆಯಸ್ಸು ಕ್ಷೀಣಿಸತ್ತೆ ಎಂದು ಕಣ್ಣುತುಂಬಿಕೊಳ್ಳುವ ಶಾರದಮ್ಮ, ಪುಣ್ಯವಂತರಿಗೆ ಪಾಪ ಪ್ರಜ್ನೆ. ಪಾಪಿಗಳಿಗೆ ಪ್ರಜ್ನೆನೇ ಇರೋಲ್ಲ, ಪಾಪ ಪ್ರಜ್ನೆ ಎಲ್ಲಿರುತ್ತೇ ಎನ್ನುವ ಭ್ರಷ್ಠ ಅಧಿಕಾರಿ ಶ್ರೀನಿವಾಸ. ಟೀಚರ್ಸ್ ಗೆ ಕೊಡಬೇಕಿರೋದ್ರಲ್ಲಿ ಉಳಿಸಿ ಅರ್ಚಕರಿಗೆ ಕೊಡ್ತಿರಿ, ವಿದ್ಯಾಲಯ ದೇವಾಲಯ ಆಗಬೇಕಂತೆ, ಆದರೆ ನೀವು ದೇವಾಲಯಾನೇ ವಿದ್ಯಾಲಯ ಮಾಡಿಬಿಟ್ರಿ ಎನ್ನುವ ಮೊಮ್ಮಗಳು ಮನಸ್ಸಿನಲ್ಲಿ ಉಳಿಯುವುದೇ ಸೇತುರಾಂ ಆ ಪಾತ್ರದ ಮೂಲಕ ಕೊಟ್ಟ ಮನಮುಟ್ಟುವ ಚುರುಕು ಸಂಭಾಷಣೆಯಿಂದಾಗಿ.
ಈ ಧಾರಾವಾಹಿ ಕೇವಲ ಕರ್ನಾಟಕದಲ್ಲಿ ಟಿ.ವಿ ಮುಂದೆ ಕುಳಿತ ವೀಕ್ಷಕರ ಮನಗೆದ್ದಿದ್ದು ಮಾತ್ರವಲ್ಲ. ವಿದೇಶದಲ್ಲಿರುವ ಕನ್ನಡಿಗರೂ ಇದಕ್ಕೆ ಮನಸೋತಿದ್ದಿದೆ. ಗಂಡ ಹೆಂಡತಿ ಬೆಳಗಿನಿಂದ ಸಂಜೆಯವರೆಗೆ ದುಡಿದು, ಸಂಜೆ ಒಟ್ಟಿಗೇ ಕಂಪ್ಯೂಟರ್ ಮುಂದೆ ಆಸೀನರಾಗುತ್ತಿದ್ದರು ಎಂದರೆ ಅದು ಅನಾವರಣದ ವೀಕ್ಷಣೆಗೆ.ಇನ್ನು ಫೇಸ್ ಬುಕ್ ನಂತಹ ಸಾಮಾಜಿಕ ತಾಣದಲ್ಲಿ ಕೂಡ ಧಾರಾವಾಹಿ ನೋಡುಗರ ಗುಂಪು ಪ್ರಾರಂಭವಾಯಿತು. ಪ್ರತಿ ಎಪಿಸೋಡುಗಳ ಬಗ್ಗೆ ಚರ್ಚೆ ನಡೆದವು. ಧಾರಾವಾಹಿ ಮುಗಿಯುವ ಹೊತ್ತಿಗೆ ಫೇಸ್ ಬುಕ್ ಗೆಳೆಯರು ಸೇತುರಾಂರೊಂದಿಗೆ ಭಾವದರ್ಪಣ ಎಂಬ ಕಾರ್ಯಕ್ರಮ ಇಟ್ಟುಕೊಂಡರು. ಆಗಲೇ 50 ಎಪಿಸೋಡು ದಾಟಿದ್ದ ಧಾರಾವಾಹಿಯ ಒಂದು ಎಪಿಸೋಡು ನೋಡಿದ ಗೆಳತಿಯೊಬ್ಬಳು ಗಬಗಬನೆ ಮೊದಲಿನಿಂದ ಎಲ್ಲಾ ಎಪಿಸೋಡುಗಳನ್ನು ವಾರದಲ್ಲೇ ನೋಡಿ ಮುಗಿಸಿದ್ದಳು. ಮುಖ್ಯವಾಗಿ ಅನಾವರಣ, ಕನ್ನಡ ಧಾರಾವಾಹಿಗಳೆಂದರೆ ಮೂಗು ಮುರಿಯುತ್ತಿದ್ದವರನ್ನ ತನ್ನತ್ತ ಸೆಳೆಯಿತು. ಹಾಗೇ ನೋಡಿದರೆ 139 ಎಪಿಸೋಡುಗಳ ಅನಾವರಣ ಕೇವಲ ಧಾರಾವಾಹಿಯಾಗಿ ಉಳಿಯದೆ ಒಂದು ಶ್ರೇಷ್ಠ ಕೃತಿಯಂತೆ ಕಂಡದ್ದು ಅದರ ಸಾರ್ಥಕತೆ. ಕೊನೆಯ ಎಪಿಸೋಡಿನ ಕೊನೆಯ ಸಂಭಾಷಣೆ ಹೀಗೆ ಬರುತ್ತದೆ ’ಚೈತನ್ಯವಿರೋ ಚಿತ್ತ ಇನ್ನೂ ಬದುಕಿದೆ, ಪ್ರಪಂಚ ನೋಡಿ ಮೂಗಿನ ಮೇಲೆ ಬೆರಳಿಡೋ ಚಿತ್ತಾರವಾಗಲಿ, ನೀವು ಎಷ್ಟೇ ಅಡಚಣೆ ಒಡ್ಡಿದರೂ ನಾನು ಬದುಕೇ ತೀರ್ತೀನಿ” ಬಹುಶಃ ಇದು ಸೇತುರಾಂರ ಮನಸ್ಸಿನ ಮಾತ? ಸೇತುರಾಂ ತಮ್ಮ ಅನುಭವದ ಮೂಸೆಯಿಂದ ಮತ್ತೊಂದಿಷ್ಟನ್ನು ಮೊಗೆದು ನಮ್ಮ ಮನೆಯಂಗಳಕ್ಕೆ ಬೇಗ ಬರಲಿ.




super sethuram