Skip to content

ನಿಮ್ಮರ್ಧ ಪಂಚೆ ಉಟ್ಟುಕೊಂಡು ಜೀವನ ಮಾಡಬಲ್ಲೆ ಎಂದಿದ್ದರು ಆಕೆ….

September 26, 2011

                 ’ನಾವು ಬರೆಯುವ ಜೀವನ ಚರಿತ್ರೆಯು ಚೆನ್ನಾಗಿ ಆಗಬೇಕಾದರೆ ಬರೆಯುವ ವ್ಯಕ್ತಿಗೂ ಬರವಣಿಗೆಗೆ ಗುರಿಯಾದ ಮನುಷ್ಯನಿಗೂ ನಿಕಟವಾದ ಪರಿಚಯ ಇರಲೇಬೇಕು. ಕೇವಲ ಪ್ರಾಕ್ ಸಂಶೋಧನೆಗಳಿಂದ ಬರೆಯತಕ್ಕ ಜೀವನ ಚರಿತ್ರೆ, ಒಬ್ಬ ವ್ಯಕ್ತಿಯ ಕೆಲಸಗಳ ’ಕೆಟಲಾಗ್’ ಆದೀತು’ ಎಂದಿದ್ದರು ಕೋಟ ಶಿವರಾಮ ಕಾರಂತರು. ನೀವು ಲೈಬ್ರರಿ ಹೊಕ್ಕು, ಬಯೋಗ್ರಫಿ ಸೆಕ್ಷನ್ನಿನ್ನಲ್ಲಿ ತಡಕಾಡಿದರೆ ಏನಿಲ್ಲವೆಂದರೂ ಗಾಂಧೀಜಿಯವರ ಬಗ್ಗೆ, ನೆಹರು, ಇಂದಿರಾ ಗಾಂಧಿಯವರ ಬಗ್ಗೆ ಇಂತಹ ಹತ್ತಾರು ಕೆಟಲಾಗ್ ಕೃತಿಗಳು ಕೈಗೆ ಎಡತಾಕುತ್ತವೆ. ಇಂದಿರಾ ಗಾಂಧಿಯವರ ಬಗ್ಗೆ ಇರುವ ಇಂತಹ ಎರಡು ಕೃತಿಗಳನ್ನು ಪಕ್ಕದಲ್ಲಿಟ್ಟು ಕೊಂಡು ಓದುತ್ತಾ ಹೋಗಿ, ಎರಡೂ ಬೇರೆ ಬೇರೆ ಲೇಖಕರು ಬರೆದದ್ದು. ಇಬ್ಬರೂ ಲೇಖಕರು ಇಂದಿರಾರನ್ನ ವಿಭಿನ್ನ ನೆಲೆಯಲ್ಲಿ ಗ್ರಹಿಸುತ್ತಾ, ಇನ್ಯಾವುದೋ ಗ್ರಂಥದ ಮಾಹಿತಿ ಹೆಕ್ಕುತ್ತಾ, ತಮ್ಮದೇ ನಿರೂಪಣೆಯಲ್ಲಿ ಪುಟತುಂಬಿಸಿದ ಕೃತಿಗಳಾಗಿರುತ್ತವೆ.

                 ಅಂತಹ ಹತ್ತು ಕೃತಿಗಳನ್ನು ಓದಿದರೂ ಹೊಸದೆನಿಸುವ, ಕುತೂಹಲವೆನಿಸುವ ಯಾವೊಂದು ವಿಷಯವೂ ಇಂದಿರಾ ಗಾಂಧಿಯವರ ಬಗ್ಗೆ ಸಿಗುವುದು ಅನುಮಾನವೇ.ಇತ್ತೀಚೆಗೆ ಇಂದಿರಾಗೆ ತೀರಾ ಹತ್ತಿರವಿದ್ದ ಪಪುಲ್ ಜಯಕರ್ ಬರೆದ ಇಂದಿರಾ ಜೀವನ ಚರಿತ್ರೆಯ ಪುಟ ತಿರುವಿಹಾಕುವಾಗ ಅನಿಸಿದ್ದೂ ಅದೇ. ಹೊಸತೇನು ಇಲ್ಲ. ಪಪುಲ್ ಜಯಕರ್ ಇಂದಿರಾರನ್ನು ತೀರಾ ಹತ್ತಿರದಿಂದ ಕಂಡವರು, ಇಂದಿರಾ ಸಮಸ್ಯೆಗಳಿಗೆ ಕಿವಿಯಾದವರು, ಸಾಂತ್ವಾನದ ಮಾತುಗಳಾಡಿದವರು. ಆದರೂ ಆ ಆಪ್ತತೆ ಇಂದಿರಾ ವಯುಕ್ತಿಕ ಜೀವನದ ಯಾರಿಗೂ ಗೊತ್ತಿರದ ವಿಷಯವನ್ನೇನು ತೆರೆದಿಡಲು ನೆರವಾಗಲಿಲ್ಲ. ಹಾಗೆಯೇ ಕನ್ನಡದ ಅನೇಕ ಲೇಖಕರ ಬಗ್ಗೆ ಇಂಥ ಕೆಟಲಾಗ್ ಎನಿಸುವ ಪುಸ್ತಕಗಳು ಬಂದಿವೆ. ಅಪರೂಪದ ಕಥೆಗಾರ, ಕಾದಂಬರಿಕಾರ ಮತ್ತು ಅನೇಕ ಕಾರಣಕ್ಕೆ ಕುತೂಹಲ ಉಂಟುಮಾಡುವ ಪೂರ್ಣಚಂದ್ರ ತೇಜಸ್ವಿ ಬಗ್ಗೆ ಅನೇಕರು ಬರೆದಿದ್ದಾರೆ. ಅದನ್ನೆಲ್ಲಾ ಓದಿದರೂ ರಾಜೇಶ್ವರಿಯವರು ತೇಜಸ್ವಿ ಬಗ್ಗೆ ಬರೆಯುತ್ತಿದ್ದಾರೆ ಎಂದಾಗ, ಕಂಡಿತಾ ಇದುವರೆಗೂ ಗೊತ್ತಿಲ್ಲದ ತೇಜಸ್ವಿಯವರ ಯಾವುದಾದರೂ ಗುಣ, ಅಭಿರುಚಿ, ಜೀವನದ ಮಜಲು ರಾಜೇಶ್ವರಿ ತೆರೆದಿಡುತ್ತಾರೆ ಎಂಬ ಆಸೆ ಉಂಟಾಗುತ್ತದೆ.

                ಕಾರಣವಿಷ್ಠೇ. ಒಬ್ಬ ವ್ಯಕ್ತಿಯನ್ನ ಅವನ ಹೆಂಡತಿಗಿಂತ ಇನ್ಯಾರು ತಾನೇ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ. ಹಗಲು, ರಾತ್ರಿ, ಕಷ್ಠ, ನಷ್ಠ, ಸಂತೋಷ, ಸನ್ಮಾನ, ಅವಮಾನಗಳಲ್ಲಿ ಜೊತೆಗಿರುವವಳು ಹೆಂಡತಿ. ಕೋಪ ಬಂದಾಗ, ಸಂತಸವಾದಾಗ, ಯಾರಾದರೂ ತೆಗಳಿದಾಗ, ಆರೋಗ್ಯ ಕೆಟ್ಟಾಗ, ಬಹುಮಾನ ಬಂದಾಗ ಹೇಗೆಲ್ಲಾ ಇವರ ಭಾವನೆ, ನಡವಳಿಕೆ ಬದಲಾಗುತ್ತಿತ್ತು. ಆ ಸಂದರ್ಭದಲ್ಲಿ ಹೆಂಡತಿಯಾಗಿ ಅವರೊಂದಿಗಿನ ಬದುಕು ಸಹ್ಯವಾಗಿತ್ತಾ ಎಂಬುದನ್ನು ಹೆಂಡತಿ ಮಾತ್ರ ಹೇಳಬಲ್ಲಳು. ಆದ್ದರಿಂದಲೇ ಯಾರ ಬಗ್ಗೆಯಾದರು ಅವರ ಹೆಂಡತಿ ಮಾತಿಗೆ ನಿಲ್ಲುತ್ತಾರೆ, ಪುಸ್ತಕ ಬರೆಯುತ್ತಿದ್ದಾರೆ ಎಂದರೆ ಹೊಸ ನಿರೀಕ್ಷೆ ಮೂಡುತ್ತದೆ. ಅಂತಹ ಮಾತು, ಬರಹ ಆಪ್ತವೆನಿಸುತ್ತದೆ. ಅನೇಕರು ಅನಕೃ ಬಗ್ಗೆ ಪುಟಗಟ್ಟಲೇ ಬರೆದಿದ್ದರೂ ವಸಂತಾದೇವಿ ಅನಾಕೃ ಕೇವಲ ಎರಡು ಪ್ಯಾರದಲ್ಲಿ ತಮ್ಮ ಗಂಡನ ಬಗ್ಗೆ ಬರೆದರೆ ಅದು ಕಟ್ಟಿಕೊಡುವ ಅನಕೃ ವ್ಯಕ್ತಿತ್ವವೇ ಬೇರೆ. ಹೀಗೆ ಅನಕೃ ಬಗ್ಗೆ ಓದುತ್ತಿದ್ದಾಗ ಅನಕೃರ ಮಡದಿ ವಸಂತಾದೇವಿಯವರು ಬರೆದ ಒಂದು ಪುಟ್ಟ ಲೇಖನವೂ ಸಿಕ್ಕಿತು. ವಸಂತಾದೇವಿ ಏನೆನ್ನುತ್ತಾರೋ ನೀವೂ ಓದಿ..

                ’ಮದುವೆಯ ನಿಶ್ಚಿತಾರ್ಥದ ರಾತ್ರಿ ವಿಶ್ವೇಶ್ವರ ಪುರಂ ಸರ್ಕಲ್ ಬಳಿ ನನ್ನನ್ನು ಬೆಳಗಿನ ಜಾವದವರೆಗೂ ತಮ್ಮ ಮುಂದೆ ಕೂಡಿಸಿಕೊಂಡು, ನನ್ನಿಂದ ಹಾಡು ಹೇಳಿಸಿದ್ದ ಕೃಷ್ಣರಾಯರು ನೋವು ತುಂಬಿದ ದನಿಯಲ್ಲಿ ಕೇಳಿದ್ದರು.’ನಂದು ಏರುಪೇರು ಬದುಕು, ನಾವಿಬ್ಬರೂ ಮುಳ್ಳಿನ ಹಾದಿಲೇ ನಡೀಬೇಕು, ಇದಕ್ಕೆ ನಿನ್ನ ಒಪ್ಪಿಗೆಯಿದೆಯೇ?’ ಅಂತ. ಇಪ್ಪತ್ತನಾಲ್ಕು ವಯಸ್ಸಿನ ಅವರ ಈ ಪ್ರಶ್ನೆ ಸಾಕಷ್ಟು ಪ್ರಬುದ್ದವಾಗೇನೋ ಇತ್ತು. ಆದರೆ ಹದಿನಾಲ್ಕು ವರ್ಷದ ನಾನು ಈ ಪ್ರಶ್ನೆಗೆ ಏನೆಂದು ಉತ್ತರಿಸಬಲ್ಲೆ. ಚೆನ್ನಾಗಿ ಓದಿ ಡಾಕ್ಟರ್ ಆಗಬೇಕು, ತುಂಬಾ ಪುಸ್ತಕಗಳನ್ನ ಓದಿಕೋಬೇಕು ಎಂದು ಕನಸು ಕಟ್ಟಿದ್ದ ನನಗೆ ಕೃಷ್ಣರಾಯರು ಮೋಹಕವಾಗಿ ಕಂಡರು. ” ನೀವು ನಂಗೇನೂ ಕೊಡದಿದ್ದರೂ ಪರವಾಗಿಲ್ಲ, ನಿಮ್ಮರ್ಧ ಪಂಚೆ ಉಟ್ಕೊಂಡು ನಾನು ಜೀವನ ಮಾಡಬಲ್ಲೆ” ಎಂದೆ.

                 ಇದು ಅವರ ಮದುವೆಯ ಮೊದಲಿನ ಸಂಭಾಷಣೆಯಾದರೆ, ಮದುವೆಯಾಗಿ ಅನೇಕ ವರ್ಷಗಳ ನಂತರ ಅನಾಕೃ ಬದಲಾಗಿದ್ದರು, ಆ ಬಗ್ಗೆ ವಸಂತಾದೇವಿಯವರು ಹೇಳುವುದು, “ಕೊನೆಕೊನೆಗೆ ರಾಯರ ವರ್ತನೆಯೇ ವಿಚಿತ್ರವಾಯಿತು. ಯಾವಾಗಲೂ ಅನುಮಾನ. ಹೆಂಡತಿ ತನ್ನೊಬ್ಬಳಿಗೇ ಸೇರಿದವಳು ಎಂಬ ಭಾವನೆ. ನಾನು ಎಂದಾದರೂ ಚೆನ್ನಾಗಿ ಅಲಂಕಾರ ಮಾಡ್ಕೊಂಡ್ರೆ ಬೇರಾರ ಕಣ್ಣಿಗೂ ಕಾಣಿಸಿಕೊಳ್ಳದೇ ಕೋಣೆಯಲ್ಲೇ ಅವರ ಮುಂದೆ ಕೂತಿರಬೇಕಾದ ದಿನಗಳೂ ಇದ್ದವು. ಮನೆಗೆ ನೆಂಟರಿಷ್ಟರು ಬಂದರೆ ಹೆಂಡತಿಗೆ ತನ್ನ ಮೇಲಿನ ಗಮನ ಕಡಿಮೆಯಾಗುತ್ತದಲ್ಲ ಎನ್ನುವಷ್ಟು ಸ್ವಾರ್ಥಿಯಾಗಿದ್ದರು. ಒಂದು ಹಂತದಲ್ಲಿ ದೇವರ ಪೂಜೆ ಶುರುಮಾಡಿದಾಗ ’ಎಲ್ಲಾ ಬಿಟ್ಟು ದೇವರುಗಳನ್ನ ಪೂಜೆ ಮಾಡೋದನ್ನ ಯಾವಗ ಶುರು ಮಾಡಿದೆ? ಎಂದು ಅಸಮಾಧಾನ ಪಡ್ತಿದ್ರು. ಆದರೆ ಕೊನೆ ಕೊನೆಗೆ ತುಂಬಾ ಸೆಂಟಿಮೆಂಟ್ ಆಗಿಬಿಟ್ರು ’ತಮ್ಮ ಹೊಸ ಕಾದಂಬರಿ ಹಸ್ತಪ್ರತಿಯನ್ನ ದೇವರ ಮುಂದಿಟ್ಟು ಪೂಜೆ ಮಾಡಿಕೊಡು ” ಅಂತ ಹೇಳೋ ಮಟ್ಟಕ್ಕೆ ಬಂದರು.

                 ನೋಡಿ, ಯಾವೊಬ್ಬ ಲೇಖಕನೂ ಅನಕೃ ಬಗ್ಗೆ ಹೇಳದಿದ್ದದ್ದು ವಂಸತಾದೇವಿಯರು ಅನಕೃ ಬಗ್ಗೆ ಹೇಳ ಹೊರಟಾಗ ಹೇಗೆ ತೆರೆದುಕೊಳ್ಳುತ್ತದೆ. ಕೃಷ್ಣರಾಯರಲ್ಲೂ ಗೊಂದಲ, ತಮ್ಮದೇ ನಿಲುವಿನೊಂದಿಗಿನ ದ್ವಂದ್ವಗಳಿದ್ದವು ಎಂಬುದು ವಸಂತಾದೇವಿಯೊಬ್ಬರು ಮಾತ್ರ ಬಿಚ್ಚಿಡಬಲ್ಲರು. ಒಬ್ಬ ವ್ಯಕ್ತಿಯ ದೌರ್ಬಲ್ಯಗಳು, ಬದುಕಿನ ದ್ವಂದ್ವಗಳು ಡಾಳಾಗಿ ಕಾಣುವುದು ಮೊದಲಿಗೆ ಹೆಂಡತಿಗೆ ಮಾತ್ರ. ವಸಂತಾದೇವಿಯವರು ಅನಕೃರ ಸದ್ಗುಣ, ಪರೋಪಕಾರ, ಕನ್ನಡ ಪ್ರೀತಿ, ಬರವಣಿಗೆಯ ಸಾಮರ್ಥ್ಯ, ದೌರ್ಬಲ್ಯ, ದ್ವಂದ್ವ ಎಲ್ಲವುಗಳ ಬಗ್ಗೆ ಬರೆದದ್ದು ಓದಿ ಮುಗಿಸುವ ಹೊತ್ತಿಗೆ ಅನಕೃ ಮೇಲೆ ಗೌರವ ಹೆಚ್ಚಾಯಿತು, ಆದರೆ ವಸಂತಾದೇವಿಯವರು ಅದಕ್ಕೂ ಮೀರಿದ ಗೌರವ ಗಳಿಸಿಕೊಂಡಿದ್ದರು.

One Comment leave one →
  1. ವಿದ್ಯಾಶಂಕರ್ ಹರಪನಹಳ್ಳಿ permalink
    January 8, 2012 7:20 pm

    ತುಂಬಾ ಚೆನ್ನಾಗಿದೆ. ಓದಿ ಖುಷಿಯಾಯಿತು ಮತ್ತು ಹೊಸ ಒಳನೋಟ ಸಿಕ್ಕಿತು.

    - ವಿದ್ಯಾಶಂಕರ್ ಹರಪನಹಳ್ಳಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.