ಹೊಸವರ್ಷದ ಹೊಸ ಉತ್ಸಾಹ ವರ್ಷ ಪೂರ್ತಿ ಜೀವಂತವಾಗಿರಲಿ….
ಬದುಕಿನ ಖಾತೆಯಿಂದ ಮತ್ತೊಂದು ವರ್ಷ ಖರ್ಜಾಗಿ ಹೋಗಿದೆ.ಇನ್ನೆಷ್ಟು ವರ್ಷಗಳು ಉಳಿದಿದೆಯೋ ಎಂಬ ಪರಿವೇ ಇಲ್ಲದೇ ನಾವೂ ಬದುಕಿನ ಬಂಡಿಯಲ್ಲಿ ಮುನ್ನಡೆಯುತ್ತಲೇ ಇದ್ದೀವಿ. ೨೦೦೯ ಕನ್ನಡಿಗರ ಮಟ್ಟಿಗಂತೂ ಕರಾಳವಾಗಿ ಕಾಡಿದೆ. ನೆರೆ, ಕುಲಗೆಟ್ಟ ರಾಜಕೀಯ ವ್ಯವಸ್ಥೆ, ತೀರಿಹೋದ ಗಣ್ಯರು ಎಲ್ಲವೂ ನಮ್ಮನ್ನು ಸಾಕು ಸಾಕು ಮಾಡಿದೆ.
ಆದರೆ ೨೦೧೦ ನ್ನು ಹೊಸ ಆಶಾ ಭಾವನೆ ಇರಿಸಿಕೊಂಡೇ ಎದುರು ನೋಡುವ ನಮ್ಮ ಉತ್ಸಾಹ ಜೀವಂತವಾಗಿದೆ. ೨೦೧೦ ಬದುಕಿಗೆ ಮತ್ತೊಂದಿಷ್ಟು ಚೈತನ್ಯ ತುಂಬಲಿ, ಸುಖ ಶಾಂತಿ ನೆಮ್ಮದಿ ಸಮೃದ್ದವಾಗಿರಲಿ, ಒಳ್ಳೆಯತನ ತನ್ನ ಸೀಮೆದಾಟಿ ಮತ್ತೊಂದಿಷ್ಟು ಮೌಲ್ಯಗಳನ್ನು ಜೊತೆಗೂಡಿಸಿಕೊಳ್ಳಲಿ, ಪ್ರಾಮಾಣಿಕತೆ ಮಸುಕಾಗದೇ ಹಾಗೇ ಉಳಿಯಲಿ, ಒಂದಿಷ್ಟು ಸಾಧಕರು, ದೇಶಭಕ್ತರು ಸದಾ ನಮ್ಮನ್ನು ಕಾಡುತ್ತಿರಲಿ, ನಿಮ್ಮಂತ ಮತ್ತೊಂದಿಷ್ಟು ಗೆಳೆಯರು ಬಾಳಿನ ಅಂಗಳಕ್ಕೆ ಬರಲಿ ಎಂಬ ಸದಾಶಯದೊಂದಿಗೆ…
೨೦೧೦, ಹೊಸವರ್ಷದ ಶುಭಾಶಯಗಳು….
ಮೊದಲ ಪುಟಕು ಕೊನೆಯ ಪುಟಕು ಏಕೆ ಇನಿತು ಅಂತರ…?
ವಿಷ್ಣುವರ್ಧನ್ ಸದ್ದಿಲ್ಲದೆ ಎದ್ದು ಹೋಗಿದ್ದಾರೆ. ಯಾವತ್ತಿಗೂ ವಿನಯವಂತಿಕೆಗೇ ಹೆಸರಾಗಿದ್ದ, ಏನೆಲ್ಲಾ ಅಡೆತಡೆಗಳು ಬಂದರೂ ಚಿತ್ರರಂಗದಲ್ಲಿ ಬೆಳೆದ, ಚಿತ್ರರಂಗದ “ರಾಜ್”ಕೀಯದ ವಿರುದ್ದ ತೊಡಿತಟ್ಟಿ ನಿಂತ, ತನ್ನ ಅಭಿನಯ ಸಾಮರ್ಥ್ಯದಿಂದಲೇ ಎಲ್ಲ ಚಿತ್ರರಸಿಕರ ಮನಗೆದ್ದ ಅಭಿನವ ಭಾರ್ಗವ ಇನ್ನು ನೆನಪು ಮಾತ್ರ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ..?
ಬಾಲ್ಯದಲ್ಲೇ ಮನದಲ್ಲಿ ಬಂದು ಕುಳಿತವರು ವಿಷ್ಣು. ಲಯನ್ ಜಗಪತಿ ರಾವ್ ನೋಡಿ ನಾನು ಲಾಯರ್ ಆಗಬೇಕೆಂದು ಕೊಂಡಿದ್ದು, ಬಂಧನ ನೋಡಿ ನಾನು ಬಂಧನದ ನಾಯಕನಂತೆ ವೈದ್ಯನಾಗಬೇಕೆಂದು ಕನಸು ಕಟ್ಟಿದ್ದು, ಮುತ್ತಿನಹಾರ ನೋಡಿ ಆದರೆ ಸೈನಿಕನಾಗಬೇಕೆಂದು ನಿಶ್ಚಯಿಸಿ ಅದ್ಯಾವುದೂ ಆಗದೇ ಉಳಿದದ್ದು ಕೂಡ ಈಗ ನೆನಪುಮಾತ್ರ. ವಿಷ್ಣುವರ್ಧನ್ ಅಭಿನಯದ ಯಾವುದೇ ಚಿತ್ರ ನನ್ನೂರಿಗೆ ಬಂದರೂ ಅಪ್ಪ ಅಮ್ಮನನ್ನು ಪೀಡಿಸಿ ಕರೆದು ಕೊಂಡು ಹೋಗುತ್ತಿದ್ದದ್ದು, ಅದ್ಯಾವುದೋ ಸಲೂನ್ ನಲ್ಲಿ ವಿಷ್ಣು ಪೋಟೋ ಹಾಕಿದ್ದಾನೆಂದ ಮನೆಯಲ್ಲೆಲ್ಲರೂ ಹೋಗುತ್ತಿದ್ದ ಸಲೂನ್ ಬಿಟ್ಟು ಅಲ್ಲಿಗೆ ಹೋಗಲು ಪ್ರಾರಂಭಿಸಿದ್ದು, ಶಾಲೆಯಲ್ಲಿ ವಿಷ್ಣುವಿನಂತೆ ಅಭಿನಯಿಸಿ ಸೈ ಎನಿಸಿಕೊಂಡದ್ದು ಕೂಡ ಇದೀಗ ನೆನಪು ಮಾತ್ರ. ವಿಷ್ಣುವರ್ಧನ್ ಗೆ ಅಂತಿಮ ನಮನ….
ರಾಮ ಲಕ್ಷ್ಮಣರಿಲ್ಲದ ಬಿಜೆಪಿ ಇದೀಗ ಕೇವಲ ವಾನರ ಸೈನ್ಯ…!
ರಾಜಕೀಯದ ಬಗ್ಗೆ ಸದಾ ಒಂದು ಕುತೂಹಲವಿಟ್ಟುಕೊಂಡವನು ನಾನು. ತೀರ ಚಿಕ್ಕವಯಸ್ಸಿನಿಂದಲೇ ರಾಜಕೀಯ ಸಭೆಗಳಲ್ಲಿ ಅಪ್ಪನೊಂದಿಗೆ ಹಾಜರಾಗಿಬಿಡುತ್ತಿದ್ದೆ. ಹಾಗಂತ ಯಾವುದೋ ಪಕ್ಷದ ಸಭೆಗೆಂದಲ್ಲ. ನನ್ನಪ್ಪ ಎಂದೂ ಕೆಲವರ ಭಾಷಣ ತಪ್ಪಿಸುತ್ತಿರಲಿಲ್ಲ. ಅದು ಯಾವುದೇ ಪಕ್ಷದ ಸಾರ್ವಜನಿಕ ಸಭೆಯಿರಲಿ, ಅಲ್ಲಿ ನಮಗಿಷ್ಠವಾದ ಕೆಲವು ನಾಯಕರು ಭಾಷಣ ಮಾಡುತ್ತಾರೆಂದರೆ ಅಲ್ಲಿ ನಾನು ನನ್ನಪ್ಪ ಹಾಜರ್. ಅದಾಗ ಮದ್ದೂರಿನಲ್ಲಿ ಯಾವುದೇ ಪಕ್ಷದ ಸಭೆಗಳಾಗಬೇಕಿದ್ದರು ಆಗುತ್ತಿದ್ದದ್ದೇ ನಮ್ಮ ಮನೆಯ ಪಕ್ಕದಲ್ಲೇ ಇದ್ದ ಕೋಟೇ ಆವರಣದಲ್ಲಿ. ವಾಜಪೇಯಿ,ಅಡ್ವಾನಿ, ಜಾರ್ಜ್ ಫರ್ನಾಂಡಿಸ್ ರಿಂದ ಹಿಡಿದು, ಹೆಗಡೆ, ದೇವೇಗೌಡ, ಅನಂತ ಕುಮಾರ್ ತನಕ ಎಲ್ಲರೂ ಅಲ್ಲಿ ಬಂದು ಭಾಷಣ ಬಿಗಿದಿದ್ದಾರೆ.ಆದ್ದರಿಂದಲೇ ಏನೋ ತೀರ ಖುದ್ದಾಗಿ ವಾಜಪೇಯಿಯವರನ್ನು ನೋಡುವ, ಅವರ ಭಾಷಣವನ್ನು ಕೇಳುವ ಅವಕಾಶ ನನಗೂ ದೊರಕಿತ್ತು. ಆದರೆ ಆ ನೆನಪುಗಳೆಲ್ಲಾ ಈಗ ಮಸುಕು ಮಸುಕು.
ಇನ್ನೂ ನೆನಪಿದೆ, ವಾಜಪೇಯಿ ಕೋಟೆ ಆವರಣದಲ್ಲಿ ಮಾತಿಗೆ ನಿಂತಿದ್ದರು. ಸರಿಯಾದ ಸಿದ್ದತೆಯಿಲ್ಲದೆ, ಬೇಜಾವಾಬ್ದಾರಿತನದಿಂದ ಕಟ್ಟಿದ್ದರಿಂದೇನೋ ಸ್ಟೇಜ್ ಒಮ್ಮೆಲೇ ಕುಸಿಯಿತು, ಎದುರಿಗಿದ್ದ ಮೈಕ್ ಅಟಲ್ ರ ಹಣೆಗೆ ತಗುಲಿ ರಕ್ತವೂ ಬಂತೂ, ಆದರೂ ಅಟಲ್ ಸಿಟ್ಟುಮಾಡಿಕೊಂಡು, ಆಯೋಜಕರ ಮೇಲೆ ರೇಗಲಿಲ್ಲ. ಕ್ಷಣದಲ್ಲೇ ಸ್ಟೇಜ್ ಇಳಿದು ರಸ್ತೆಯ ಇನ್ನೊಂದು ಮಗ್ಗುಲಿನ ಎತ್ತರದ ಸ್ಥಳದಲ್ಲಿ ನಿಂತು ಭಾಷಣ ಪ್ರಾರಂಭಿಸಿಯೇ ಬಿಟ್ಟರು. ಸಭೆಯ ಪೂರ್ತಿ ನಿಶ್ಯಬ್ದ. ಅವರಾಡಿದ ಮಾತುಗಳು ನೆನಪಿಲ್ಲದಿದ್ದರೂ ಆ ಘಟನೆ ಮಾತ್ರ ಇನ್ನೂ ಹಚ್ಚ ಹಸುರಾಗಿದೆ. ನನ್ನೂರಿಗೆ ಬಂದ ಮಾಹನ್ ನಾಯಕನಿಗೆ ಈ ಅಭಾಸವಾಯಿತಲ್ಲ ಎಂಬ ಕೊರಗು ಕೂಡ ಇನ್ನೂ ಇದೆ.
ನಾನು ತೀರ ಇಷ್ಠಪಡುವ ರಾಜಕೀಯ ನಾಯಕರಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಶ್ಯಾಮ್ ಪ್ರಸಾದ್ ಮುಖರ್ಜಿ, ಇಂದಿರಾ ಗಾಂಧಿ(ಕೆಲವು ವಿಷಯದಲ್ಲಿ ಇಷ್ಠವಾಗದೇ ಹೋದರು), ವಾಜಪೇಯಿ, ಅಡ್ವಾನಿ, ಜಾರ್ಜ್, ಪ್ರಣಬ್ ಮುಖರ್ಜಿ, ಎ.ಕೆ ಆಥೋನಿ ಮೊದಲ ಪಟ್ಟಿಯಲ್ಲೇ ನಿಲ್ಲುತ್ತಾರೆ. ಒಬ್ಬೊಬ್ಬರೂ ಒಂದೊಂದು ಕಾರಣಕ್ಕೆ ಇಷ್ಠ.ಆದರೆ ವಾಜಪೇಯಿಯವರನ್ನು ಇಷ್ಠ ಪಡಲು ಕಾರಣಗಳೇ ಬೇಕಿಲ್ಲ. ಇಷ್ಟ ಪಡದಿರಲು ಕಾರಣಗಳೂ ಸಿಗುತ್ತಿಲ್ಲ.ಅವರು ಕೇವಲ ರಾಜಕಾರಣಿಯ? ಅಲ್ಲ, ಅವರೊಬ್ಬ ಕವಿ ಹೃದಯಿ, ಸಜ್ಜನ, ಅಪ್ರತಿಮ ಮಾತುಗಾರ, ಸಂಘಟಕ , ಪ್ರಾಮಾಣಿಕೆ ಕೆಲಸಗಾರ ಇನ್ನೂ ಏನೇನೋ…
ಅದರೆ ಇದೀಗ ನೋಡಿ, ರಾಮ-ಲಕ್ಷಣ ರಂತಿದ್ದ ಅದ್ವಾನಿ-ವಾಜಪೇಯಿ ಬಿಜೆಪಿಯಿಂದ ದೂರ ದೂರ. ವಾಜಪೇಯಿಯವರಂತೂ ಹಾಸಿಗೆ ಹಿಡಿದು ಬಿಟ್ಟಿದ್ದಾರೆ.ಅದ್ವಾನಿ ಕೂಡ ತೆರೆಮರೆಗೆ ಸರಿದಿದ್ದಾರೆ. ಇವರಿಬ್ಬರಿಲ್ಲದ ಬಿಜೆಪಿ ಊಹಿಸಿಕೊಳ್ಳಲಿಕ್ಕಾದರೂ ಸಾಧ್ಯವೇ? ಯಾವಾಗ ವಾಜಪೇಯಿ ದೂರ ಸರಿದರೋ ಅದ್ವಾನಿ ದುರ್ಭಲರಾದರೂ, ಅವರ ಮಾತಿಗೆ ಕವಡೆ ಕಿಮ್ಮತ್ತಿಲ್ಲದಂತಾಯಿತು. ಪಕ್ಷದ ಒಳೆಗೇ ಶರಂಪರ ಒಳಜಗಳ, ಗುಂಪುಗಾರಿಕೆ. ಬಿಜೆಪಿ ಒಂದು ಪ್ರಬಲ ರಾಷ್ಟ್ರೀಯ ಪಕ್ಷವಾಗಿ ಉಳಿಯುತ್ತದಾ..? ಕಾದು ನೋಡಬೇಕಿದೆ.
ಕರ್ನಾಟಕದಲ್ಲೇ ಏನಾಗುತ್ತಿದೆಯೋ ನೋಡಿ, ಮೂರೂ ಬಿಟ್ಟವರು, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದವರು, ಕಚ್ಚೇ ಹರುಕರು ಮಂತ್ರಿಗಳಾಗುತ್ತಿದ್ದಾರೆ. ಪಕ್ಷದ ತತ್ವ ಸಿದ್ದಾಂತವೆಲ್ಲಾ ಅಧಿಕಾರ ಹಿಡಿದೊಡನೆ ಮಂಗ ಮಾಯಾ..! ಅತ್ತ ಬರೀ ಜನರಿಗೆ ಬುದ್ದಿವಾದ ಹೇಳುವುದನ್ನೇ ಕಾಯಕವಾಗಿಸಿಕೊಂಡ “ಕೇಶವ ಕೃಪ”ದವರು ಕೂಡ ಬಾಯಿಗೆ ಬೀಗ ಜಡಿದು ಕೂತಿದ್ದಾರೆ.
ಬಿಡಿ, ಆ ಮಾತುಗಳೆಲ್ಲಾ ಒತ್ತಟ್ಟಿಗಿರಲಿ. ಇಂದು ಅಟಲ್ ಜನುಮದಿನ. ಅಜಾತಶತ್ರು ಹಿರಿಯಜ್ಜ ೮೬ ಕ್ಕೆ ಕಾಲಿಟ್ಟಿದ್ದಾರೆ. ಅವರ ನೆನಪಲ್ಲಿ ಅವರ ಒಂದೆರಡು ಮಾತು, ಕವಿತೆ ನೆನಪಿಸಿಕೊಳ್ಳೊಣ.
ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿತ್ತು ಎಂದಿನಂತೆ ಬಿಜೆಪಿಯನ್ನು ದೂರೂವುದನ್ನೇ ತಮ್ಮ ಮುಖ್ಯ ಕೆಲಸವಾಗಿಸಿಕೊಂಡಿದ್ದವರಲ್ಲಿ ಒಬ್ಬರಾದ ರಾಮ್ ವಿಲಾಸ್ ಪಾಸ್ವಾನ್ ಮಾತನಾಡುತ್ತಿದ್ದರು. ಪಾಸ್ವಾನ್ ಹೀಗೆಂದರು- “ಬಿಜೆಪಿಯವರು ರಾಮನ ಬಗ್ಗೆ ಭಾರಿ ಮಾತನಾಡುತ್ತಾರೆ. ಆದರೆ, ಅವರಲ್ಲಿ ನಿಜಕ್ಕೂ ರಾಮನಿಲ್ಲ. ಹಾಗೆ ನೋಡಿದರೆ ನನ್ನ ಹೆಸರಿನಲ್ಲೂ ರಾಮನಿದ್ದಾನೆ” ಅದಕ್ಕೆ ಅಟಲ್ ರ ಪ್ರತಿಕ್ರಿಯೆ ಹೀಗಿತ್ತು. “ಪಾಸ್ವಾನ್ ಜೀ ಹರಾಮ್ ಎಂಬ ಪದದಲ್ಲೂ ರಾಮನಿದ್ದಾನೆ!” ಪಾಸ್ವಾನ್ ಮರು ಮಾತನಾಡದೆ ತೆಪ್ಪಗಾದರು.
ಅಟಲ್ ರ ಒಂದು ಕವಿತೆ ಹೀಗಿದೆ
ಬರುತ್ತಿದೆ ಬಾಳಸಂಜೆ ಇಳಿಯುತ್ತಿದೆ ವಯಸ್ಸು
ಸವೆದಿದೆ ದಾರಿ, ಬರುತ್ತಿದೆ ಬಾಳಸಂಜೆ
ಬದಲಾಗಿದೆ ಅರ್ಥಗಳು
ವ್ಯರ್ಥವಾಗಿವೆ ಶಬ್ದಗಳು
ನಿಸ್ಸತ್ವವಾಗಿದೆ ಶಾಂತಿಯಿಲ್ಲದ ಸಂತಸ
ಬರುತ್ತಿದೆ ಬಾಳಸಂಜೆ
ಕನಸುಗಳ ಮಮತೆ
ಚದುರಿವೆ ಗೀತೆ
ನಿಲ್ಲುತ್ತಿವೆ ಪಾದ
ತಪ್ಪುತ್ತಿವೆ ತಾಳ
ಬರುತ್ತಿದೆ ಬಾಳಸಂಜೆ
ಪಕ್ಷದೊಳಗಿನ ಭಿನ್ನ ಮತದ ಬಗ್ಗೆ ಅಟಲ್ ಹೇಳಿದ್ದು ಹೀಗೆ
ನೀವೋ(ಜನರು) ಅವರಿವರ ಬಗ್ಗೆ ಮಾತನಾಡಿಕೊಳ್ಳುತ್ತೀರಿ
ನಾವು ನಮ್ಮವರ ಬಗ್ಗೆಯೇ ಮಾತನಾಡುವುದಕ್ಕೆ ಹೆದರುತ್ತೇವೆ
ನೀವು ಗುಲಾಬಿ ಜೊತೆಗಿನ ಮುಳ್ಳುಗಳಿಗೆ ಹೆದರುತ್ತೀರಿ
ನಾವು ಗುಲಾಬಿಯ ಪಕಳೆಗಳಿಂದಲೇ ಏಟು ತಿನ್ನುತ್ತಿದ್ದೇವೆ
ಭಾರತದ ರಾಜಕೀಯದಲ್ಲೇ ಒಂದು ವಿಸಿಷ್ಠ ಛಾಪು ಮೂಡಿಸಿದ ಅಟಲ್ ಗೆ ಹುಟ್ಟು ಹಬ್ಬದ ಶುಭಾಷಯ ಹೇಳುತ್ತಲೇ, ಆ ರಾಮ - ಲಕ್ಷ್ಮಣರಿಲ್ಲದ ಬಿಜೆಪಿಯನ್ನು ವಾನರ ಸೈನ್ಯವೆಂದು ಒಪ್ಪಿಕೊಳ್ಳೋಣ. ಇಬರಿಬ್ಬರಲಿಲ್ಲದ ಪಕ್ಷವನ್ನು ಇನ್ನು ಅಪ್ಪಿಕೊಳ್ಳುವುದು ದೂರದ ಮಾತು.
ಎಂಥೆಂತಾ ಸಚಿವರ ಮಧ್ಯೆ ಇಂತವರೂ ಇದ್ದಾರೆನ್ನುವುದೇ ಸಮಾಧಾನ….
ಖಂಡಿತ ಸುರೇಶ್ ಕುಮಾರ್ ಕರೆ ಮಾಡುತ್ತಾರೆಂದು ಗೊತ್ತಿತ್ತು. ಹಾಗೆಯೇ ಆಯಿತು. ಬೆಳೆಗಿನಿಂದ ಹತ್ತಾರು ಕರೆಗಳು ಮೊಬೈಲ್ ಗೆ ರಿಂಗಣಿಸಿದ್ದವು. ಎಲ್ಲರೂ ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಮೆಚ್ಚುಗೆ ಸಹಮತ ವ್ಯಕ್ತಪಡಿಸಿದ್ದರು. ಡಿಸೆಂಬರ್ ೧೦ ರ “ಸಂಗತ” ಓದಿದ ಅನೇಕರು ಕರೆ ಮಾಡಿ ಹೇಳಿದ್ದು ಒಂದೇ,”ನಮ್ಮ ಮನದಾಳದಲ್ಲೂ ಇಂತಹ ಅನೇಕ ಪ್ರಶ್ನೆಗಳು ಯಡಿಯೂರಪ್ಪನವರಿಗೆ ಕಾದು ಕುಳಿತಿವೆ, ನೀವು ಅದನ್ನು ಪತ್ರದಲ್ಲಿ ಬರೆದಿದ್ದೀರಿ,ಇದು ನಮ್ಮೆಲ್ಲರ ಅಭಿಪ್ರಾಯ ಕೂಡ ಹೌದು“, ಭಾಜಪ ದಲ್ಲಿ ದಶಕಗಳಿಂದ ದುಡಿದವರು, ದುಡ್ಡಿನ “ಧಣಿ“ಗಳ ಮುಂದೆ ಮೂಲೆಗುಂಪಾದವರು, ಹೆಗಲಿಗೆ ಹೆಗಲು ಸೇರಿಸಿ ಪಕ್ಷಕ್ಕಾಗಿ ಮೈ ಮೆತ್ತಗಾಗಿಸಿಕೊಂಡವರು, ತಮ್ಮ ನಾಯಕರುಗಳೇ ಅಧಿಕಾರ ಹಿಡಿದೊಡನೆ ಬೀರಿದ ಅಸಡ್ಡೆ ನೋಟಕ್ಕೆ ಮನನೊಂದವರು, “ಕಟ್ಟಾ ಸ್ವಯಂಸೇವಕರು” ಹೀಗೆ ಎಲ್ಲರ ಮಾತು ಅದೇ. ಸಿಎಂ ಗೆ ಬರೆದ ಪತ್ರ ಇಡೀ ನೊಂದವರ ಮನದಾಳದ ಮಾತು.
ಸುರೇಶ್ ಕುಮಾರ್ ಕರೆಗೆ ಕಾಯುತ್ತಲೇ ಇತ್ತು ಮನಸ್ಸು. ಸರಿ, ಕರೆ ಮಾಡಿಯೇ ಬಿಟ್ಟರು ಸುರೇಶ್. ಧ್ವನಿಯಲ್ಲೇ ಇದು ಸುರೇಶ್ ಕುಮಾರ್ ಎಂದು ಗೊತ್ತಾದರೂ ಬೇಕಂತಲೇ ತಮ್ಮ ಪರಿಚಯವಾಗಲಿಲ್ಲ ಎಂದೆ. ನಾನು ಮಿನಿಸ್ಟರ್ ಸುರೇಶ್ ಕುಮಾರ್ ಎಂದು ಅವರ ಬಾಯಿಯಿಂದ ಹೇಳಿಸುವ ಹಠ ನನ್ನದು( ಸಾಮಾನ್ಯವಾಗಿ ನಾನೊಬ್ಬ ಸಚಿವ, ಅಥವ ಮಿನಿಸ್ಟರ್ ಎನ್ನುವುದಿಲ್ಲ ಸುರೇಶ್. ಬದಲಾಗಿ ಕೇವಲ ಸುರೇಶ್ ಕುಮಾರ್ ಹೆಚ್ಚೆಂದರೆ ಜನಪ್ರತಿನಿಧಿ ಎನ್ನುತ್ತಾರೆ). ಆದರೂ ತಾವೊಬ್ಬ ಸಚಿವ ಎಂದು ಅವರು ಪರಿಚಯಿಸಿಕೊಳ್ಳಲಿಲ್ಲ. ನಿಮ್ಮ ಲೇಖನದಲ್ಲಿ ಬರೆದಿದ್ದೀರಲ್ಲ ಅದೇ ಸುರೇಶ್ ಕುಮಾರ್, ಬುಧ್ಯ ಅವರೇ ಎಂದರು. ಸರಿ ನಾಲ್ಕೈದು ನಿಮಿಷದ ಮಾತು ಮುಗಿಯಿತು, ಎಂಥೆಂತಾ ಸಚಿವರ ಮಧ್ಯೆ ನೀವೂ ಇದ್ದೀರಲ್ಲಾ ಸರ್ ಅದೇ ಸಮಾಧಾನ ಎಂದೇ ನಕ್ಕು ಸುಮ್ಮನಾದರು ಸುರೇಶ್.
ಸುರೇಶ್ ಏಕೆ ಎಲ್ಲ ಸಚಿವರ ನಡುವೆ ಭಿನ್ನವಾಗಿ ನಿಲ್ಲುತ್ತಾರೆಂದರೆ ಸುರೇಶ್ ಗೆ ಎಲ್ಲದಕ್ಕೂ ಸಮಯವಿದೆ. ಬೆಳಗಿನ ವಾಕಿಂಗ್ ಗೆ ಯಾವುದಾದರೊಂದು ಉದ್ಯಾನಕ್ಕೆ ತೆರಳಿ ವಾಕಿಂಗ್ ನೆಪದಲ್ಲಿ ಅಲ್ಲಿ ಬರುವ ಜನಸಾಮಾನ್ಯರ ಜತೆ ಮಾತಿಗೆ ಇಳಿಯುತ್ತಾರೆ, ಆ ಭಾಗದ ಜನರ ಸಮಸ್ಯೆ ಏನೆಂದು ಆಲಿಸುತ್ತಾರೆ. ದಾರಿಯಲ್ಲಿ ಹೋಗುವಾಗ ಯಾವುದೋ ಅಪಘಾತ ಕಂಡರೆ ತಕ್ಷಣ ಕಾರಿನಿಂದಿಳಿದು ಸಹಾಯಕ್ಕೆ ಧಾವಿಸುತ್ತಾರೆ. ಧರಣಿ ಕೂತವರ ಜತೆ ಯಾವುದೇ ತೊಂದರೆ ಇಲ್ಲದೆ ರೋಡಿನಲ್ಲಿ ಪದ್ಮಾಸನ ಹಾಕುತ್ತಾರೆ, ಗ್ರಂಥಾಲಯದ ದ್ವಾರಗಳು ಅವರಿಗೆ ಮುಕ್ತ ಮುಕ್ತ. ಅನೇಕ ಪುಸ್ತಕ ಓದುವ ಹವ್ಯಾಸ ಸಚಿವನಾದ ಮೇಲೂ ಉಳಿಸಿಕೊಂಡಿದ್ದಾರೆ.ಪತ್ರಿಕೆಯಲ್ಲಿ ಯಾವುದೋ ಸಮಸ್ಯೆ ಬಗ್ಗೆ ಯಾರಾದರು ವಾಚಕರ ಅಂಕಣಕ್ಕೆ ಬರೆದರೂ ಕೂಡಲೆ ಪೋನು ನಂಬರ್ ತರಿಸಿಕೊಂಡು ಖುದ್ದಾಗಿ ಪೋನಾಯಿಸಿ ಸಮಸ್ಯೆ ಬಗ್ಗೆ ತಿಳಿದುಕೊಳ್ಳುತ್ತಾರೆ, ಬಗೆಹರಿಸಲು ಸಾಧ್ಯವೇ ಎಂದು ಪ್ರಯತ್ನಿಸುತ್ತಾರೆ. ಅಷ್ಠೇ ಅಲ್ಲದೆ ತಾವು ಓದಿದ ಯಾವುದೋ ಉನ್ನತ ವಿಚಾರ, ಅನುಭವಕ್ಕೆ ಬಂದ ಅಪರೂಪದ ಸಂಗತಿ, ಎಲ್ಲೋ ಕಂಡ ಆದರ್ಶದ ಮುಖ ಎಲ್ಲವನ್ನೂ ಪತ್ರಿಕೆಗೆ ಆಗಾಗ ಬರೆಯುತ್ತಾರೆ.ಹೀಗೆ ಸುರೇಶ್ ಕುಮಾರ್ ಗೆ ಎಲ್ಲದಕ್ಕೂ ಸಮಯವಿದೆ, ಸಂಯಮವಿದೆ. ಹೆಚ್ಚಾಗಿ ಸಮಸ್ಯೆಗಳಿಗೆ ಸ್ಪಂದಿಸುವ ಸೌಜನ್ಯವಿದೆ.
ಕೇವಲ ಪ್ರತಿ ದಿನವನ್ನೂ ರಿಬ್ಬನ್ ಕಟ್ ಮಾಡಲು, ಇನ್ನೇಲ್ಲೋ ಗುದ್ದಲಿ ಪೂಜೆ ಮಾಡಲು, ಮಠಾಧಿಪತಿಗಳಿಗೆ ಶಾಲು ಹೊದಿಸಿ, ಕಾಣಿಕೆ ನೀಡಿ ಪಾದ ಪೂಜೆ ಮಾಡಲು ಬಳಸುವ, ಕಾರು, ಸೆಕ್ಯುರಿಟಿ ಬಿಟ್ಟು ಕೆಳಗಿಳಿಯದ, ಜನಪ್ರತಿನಿಧಿ ಎಂದು ಹೇಳಿಕೊಂಡು ಜನರಿಂದ ದೂರ ಉಳಿಯುವ, ಮಾತನಾಡಲು ನಿಂತರೆ ಬರೀ ಪರರನ್ನ, ಪ್ರತಿ ಪಕ್ಷದವರನ್ನ ಕೊಳಕು ಭಾಷೆಯಲ್ಲೇ ದೂರುವ ಮಂತ್ರಿ ಮಹೋದಯರ ಮಧ್ಯೆ ಸುರೇಶ್ ಕುಮಾರ್ ಹತ್ತಿರವಾಗುವುದೇ ಅವರ ವ್ಯಕ್ತಿತ್ವ ಮತ್ತು ಆಸಕ್ತಿ ಗಳಿಂದ.ಎಂಥೆಂತಾ ಸಚಿವರ ಮಧ್ಯೆ ಸುರೇಶ್ ಕುಮಾರ್ ರಂತಹ ಸಜ್ಜನರೂ ಸಚಿವ ಸಂಪುಟದಲ್ಲಿದ್ದಾರೆನ್ನುವುದೇ ಒಂದು ಸಾಮಾಧಾನ.
ಸಿಎಂ ಸರ್ ಗೆ ಹೀಗೊಂದು ಪತ್ರ…
ಸುಮಾರು ನಾಲ್ಕು ಪುಟದ ಒಂದು ಪತ್ರವನ್ನ ಇತ್ತೀಚೆಗಷ್ಠೇ ಬರೆದು ಸಿಎಂ ಕಾರ್ಯಾಲಯಕ್ಕೆ ಕಳುಹಿಸಿದ್ದೆ. ಅದೇ ಪತ್ರವನ್ನ ಪತ್ರಿಕೆಗಳಿಗೂ ರವಾನಿಸಿದ್ದೆ.ಕೊಳಲು ಎಂಬ ಮಂಡ್ಯದ ಪತ್ರಿಕೆ ಆ ನಾಲ್ಕೂ ಪುಟದ ಸವಿಸ್ತಾರದ ಪತ್ರವನ್ನ ಮೊದಲು ಪ್ರಕಟಿಸಿತು. ಅಲ್ಲಿನ ಹಿರಿಯ ಬಿಜೆಪಿ ಮುಖಂಡರೂ ಸೇರಿದಂತೆ ಸುಮಾರು ೮೪ ಜನ ಕುದ್ದಾಗಿ ಪೋನಾಯಿಸಿ ಮಾತನಾಡಿದ್ದರು. ಇಂದು ಪ್ರಜಾವಾಣಿ ಕೂಡ ಅದರ ಒಟ್ಟು ಸಾರಾಂಶವನ್ನ( “ಜಾಗ” ತೀಕರಣದ ಸಮಸ್ಯೆಯಿಂದ) ಪ್ರಕಟಿಸಿದೆ.
ಇಂತಹದನ್ನೆಲ್ಲಾ ಓದುವಷ್ಟು ಸಮಯ, ತಾಳ್ಮೆ ಮುಖ್ಯಮಂತ್ರಿಗಳಿಗಿದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ಅನೇಕ ಪತ್ರಗಳು ನೇರವಾಗಿ ವಿಧಾನಸೌಧದ ಕಸದ ಬುಟ್ಟಿ ಸೇರುತ್ತವೆ ಎನ್ನುವುದು ಗೊತ್ತಿದ್ದೂ ಬರೆಯದಿರಲು ಮನಸಾಗಲಿಲ್ಲ.
(ಚಿತ್ರಕೃಪೆ: ಪ್ರಜಾವಾಣಿ)
ಬದುಕಿನ ದೊಡ್ಡದೊಂದು ಕುತೂಹಲ ಕಳೆದುಹೋಗುವ ಸಮಯ – ಮದುವೆ. ನಿಜ ತಾನೇ..?
ನನ್ನ ಸ್ನೇಹಿತರೆಲ್ಲಾ ಒಂದೆಡೆ ಸೇರಿದರೆ ಬರೀ ಅದೇ ಮಾತು. ಮಗ ಅವಳಿಗೆ ಮದುವೆ ಆಯ್ತಂತೆ, ಆ ಕುಳ್ಳಿ ಯಾರೋ ನಾರ್ತ್ ಇಂಡಿಯನ್ ನ ಲವ್ ಮಾಡ್ತಿದಾಳೋ, ಅವಳಿದ್ಲಲ್ಲ ನಾಲ್ಕು ವರ್ಷ ಒಂದು ಸ್ಮೈಲು ಕೊಡದೆ ಹೊಟ್ಟೇ ಉರಿಸಿದವಳು ಅವಳು ಆ ಕೃಷ್ಣ ಸುಂದರನ ಜೊತೆ ಓಡಾಡ್ತಿದಾಳೆ, ಇವತ್ತೊಂದು ಇಂಟರ್ ವ್ಯೂ ಇತ್ತೊ ಇಷ್ಠ ಆಗ್ಲಿಲ್ಲ ಹುಡುಗಿ… ಡೆಂಟಲೀ ಫಾರ್ವರ್ಡ್ ಮಗ… ಇತ್ಯಾದಿ ಇತ್ಯಾದಿ..
ನನ್ನ ವಯಸ್ಸಿನ ಹುಡುಗಿಯರಲ್ಲಿ ಅನೇಕರಿಗೆ ಮದುವೆಯಾಗಿ ಹೋಗಿದೆ. ಇನ್ನು ಹಲವರು “ನಾವು ಮೆಚ್ಚುವ ಹುಡುಗ ಇಲ್ಲಿಲ್ಲ ಜೋಕೆ “ಎಂದು ಪ್ರತಿ ವಿಕೇಂಡ್ ಒಬ್ಬೊಬ್ಬ ಹುಡುಗನ ಮುಂದೆ ಕೂತು ಏಳುತ್ತಿದ್ದಾರೆ. ಒಂದಿಬ್ಬರು ಗೆಳೆಯರು ಇನ್ನೂ ನಮ್ಮಪ್ಪ ಅಮ್ಮ ಮದುವೆಯಾಗು ಅಂತ ಕೇಳುತ್ತಲೇ ಇಲ್ಲ ಎನ್ನುವ ಕೊರಗಿನಲ್ಲಿದ್ದಾರೆ. ಅನೇಕರು ಅವರವರೇ ತಮ್ಮ ಸಂಗಾತಿಗಳನ್ನು ಆಯ್ದು ಕೊಂಡು ತಮ್ಮದೇ ಲೋಕದಲ್ಲಿ, ಪ್ರತಿ ದಿನದ ಗಂಟೆ ಗಟ್ಟಲೆ ಲೋಕಲ್ ಕಾಲಿನಲ್ಲೇ ಆನಂದ ಹುಡುಕುತ್ತಿದ್ದಾರೆ. ವಾರದ ಹಿಂದೆಯಷ್ಠೇ ಇಬ್ಬರು ಅವಳಿ ಸಹೋದರರು ಅವಳಿ ಸಹೋದರಿಯರನ್ನ ವರಿಸಿದ್ದಾರೆ. ಮುಂದೆ ಅವರೇ ಇವರನ್ನು worry’s ತಾರೆ.
ಅವೆಲ್ಲಾ ಬಿಡಿ, ಯೋಚಿಸಿದರೆ ಹೇಗೆ ಒಂದು ಬಹುದೊಡ್ಡ ಕುತೂಹಲ ಕ್ಷಣದಲ್ಲಿ ಕಳೆದು ಹೋಗುತ್ತದೆ ಎಂದು ಅಚ್ಚರಿಯಾಗುತ್ತದೆ. ಹಾಗೆ ನೋಡಿದರೆ ಬದುಕಿನ ತುಂಬಾ ಕುತುಹಲಗಳೇ ತುಂಬಿಕೊಂಡಿದೆ. “ನಿನ್ನೆ, ಮೊನ್ನೆಯ ಕುತೂಹಲ,” “ನಾಳೆ, ಇಂದಿನ ಕುತೂಹಲ” “ಈ ಕ್ಷಣಕ್ಕೆ ಮರು ಕ್ಷಣ ಕುತೂಹಲವೇ” ಒಟ್ಟಿನಲ್ಲಿ ಕುತುಹಲದ ಕೊಂಡಿಯನ್ನು ಒಂದಕ್ಕೊಂದು ಜೋಡಿಸಿಕೊಂಡೆ ಬದುಕಿನುದ್ದಕ್ಕೂ ನಡೆದಿರುತ್ತೇವೆ. ಆದರೆ ನನಗನ್ನಿಸುವ ಮಟ್ಟಿಗೆ ಬದುಕಿನ ಬಹುದೊಡ್ಡ ಕುತೂಹಲ- ಮದುವೆ.
ಯೌವನ ಟಿಸಿಲೊಡೆದ ಯುವಕ/ತಿ ಯ ಮನದಲ್ಲಿ ಅದಾಗ ತಾನೇ ಈ ಕುತೂಹಲದ ಬೀಜ ಮೊಳಕೆಯೊಡೆದಿರುತ್ತದೆ. ನಂತರ ಶಾಲೆ, ಕಾಲೇಜು, ಜಾತ್ರೆ, ಸಂತೆ, ನಗರದ ಮಾಲುಗಳು ಇತ್ಯಾದಿ ಸ್ಥಳಗಳಲ್ಲಿ ನಮಗೆ ಗೊತ್ತಿಲ್ಲದಂತೆಯೇ ಮನಸ್ಸು ಸಂಗಾತಿಯನ್ನು ಹುಡುಕಲು ಪ್ರಾರಂಭಿಸಿಬಿಟ್ಟಿರುತ್ತದೆ. ಪ್ರತಿ ಸುಂದರ ಹುಡುಗ/ಗಿ ಯನ್ನ ಕೂಡ ಮನಸ್ಸು ಒಂದು ಕ್ಷಣದ ಮಟ್ಟಿಗೆ ಸಂಗಾತಿಯ ಸಿಂಹಾಸದಲ್ಲಿ ಕೂರಿಸಿ ತಮಾಷೆ ನೋಡುತ್ತದೆ. ಈ ಪ್ರೀತಿ, ಕ್ರಷ್, ಇನ್ಪ್ಯಾಚುಯೇಶನ್ ಅಂತೆಲ್ಲಾ ಕರೆಯುವುದು ಇಂತಹ ಮನಸ್ಸು ಮಾಡುವ ಚೇಷ್ಠೆಯೇ. ಹೀಗೆ ವರುಷಗಳಿಂದ ಅನೇಕರಲ್ಲಿ ಹುಡುಕುತ್ತಿದ್ದ ಸಂಗಾತಿ ಚಕ್ಕನೆ ಒಂದೇ ನೋಟಕ್ಕೆ, ಒಂದೇ ಭೇಟಿಗೆ, ಒಂದೇ ಮಾತಿಗೆ ಸಿಕ್ಕಿಬಿಟ್ಟಾರೆ? ಮನಸ್ಸು ಸಂಭ್ರಮ ಪಡುತ್ತದೆ. ಆದರೆ ಅಷ್ಠೂ ವರ್ಷಗಳ ಕುತೂಹಲ ಕಾಲ್ಕಿತ್ತಿರುತ್ತದೆ. ಇವಳೇ/ನೇ ನನ್ನ ಬದುಕಿನಲ್ಲಿ ಬರುವ ಸಂಗಾತಿ ಎಂಬುದು ಎಷ್ಠು ಸಪ್ಪೆಯಾದ ವಿಷಯ ಅಲ್ಲವೇ..? ಹೀಗೆ ಸಂಗಾತಿ ಬದುಕಿನಲ್ಲಿ ನಾಲ್ಕು ಜನರ ಮಧ್ಯೆ ಬರುವ ಕ್ಷಣವೇ ಮದುವೆ. ಮದುವೆಯಿಂದ ಏನೇನನ್ನೋ(?) ಪಡೆದುಕೊಳ್ಳುತ್ತೇವೆ ಆದರೆ ಒಂದು ಬೆಚ್ಚನೆಯ ಸಿಹಿ ಕುತೂಹಲವನ್ನ ಕಳೆದುಕೊಳ್ಳುತ್ತೇವೇ..
ಛೇ.. ನಮ್ಮ ಹುಡುಗರಾದರೂ ಯಾಕೆ ಅಂತಹ ನವಿರಾದ ಕುತೂಹಲವನ್ನು ಇಷ್ಠು ಬೇಗ ಕಳೆದುಕೊಳ್ಳಲು ಹಾತೊರೆಯುತ್ತಾರೆ..? ಸದ್ಯ ನನ್ನ ಮಟ್ಟಿಗಂತೂ ಆ ಕುತೂಹಲ ಜೀವಂತವಾಗಿದೆ, ಮನಸ್ಸು ಕೂಡ ಸಂಗಾತಿಯನ್ನು ನೋಡುವ ಪ್ರತಿ ಹುಡುಗಿಯಲ್ಲೂ ಹುಡುಕುತ್ತಾ ಚೇಷ್ಠೇ ಮಾಡುತ್ತಿದೆ.. ಇರಲಿ ಬಿಡಿ ಆ ಚೇಷ್ಠೇಯಲ್ಲೂ ಮಜಾ ಇದೆ…
ಗುಣಗಳನ್ನೆಲ್ಲಾ ಪಣ ಇಟ್ಟು ಬರೀ “ಗಣ”ವೇಷ ಹಾಕಿದರೇನು ಪ್ರಯೋಜನ…?
ಆರೆಸ್ಸೆಸ್ ಸರಸಂಘಚಾಲಕರು ಬೆಂಗಳೂರಿಗೆ ಬರುತ್ತಾರೆಂದಾಗಲೇ ಇಡೀ ಯಡಿಯೂರಪ್ಪನವರ “ಗಣ”ವೇ ಕೇಶವ ಕೃಪದಲ್ಲಿ “ಗಣ”ವೇಷದೊಂದಿಗೆ ಬೈಠಕ್ ಕೂರುತ್ತದೆಂದು ಎಲ್ಲರಿಗೂ ತಿಳಿದಿತ್ತು. ಎಲ್ಲರೂ ಸಂಕಟ ಬಂದಾಗ ವೆಂಕಟರಮಣ ಎಂದರೆ, ನಮ್ಮ ಬಿಜೆಪಿ ಯವರದು “ಸಂಕಟ ಬಂದಾಗ ಕೇಶವ” ಎನ್ನುವ ಮಂತ್ರ.ಬಿಜೆಪಿಯ ಎಲ್ಲ ಬಿಕ್ಕಟ್ಟಿಗೂ ಪರಿಹಾರ ಸಿಗುವುದೇ ಕೇಶವ ಕೃಪದಲ್ಲಿ. ಮುಖ್ಯಮಂತ್ರಿಗಳು ಅಥವಾ ಮತ್ತಿನ್ಯಾವುದೇ ಸಚಿವರು ಪದೇ ಪದೇ ಕೇಶವ ಕೃಪದ ಮೆಟ್ಟಿಲೇರುತ್ತಿದ್ದಾರೆಂದರೆ ಏನೋ ಕುತ್ತಿಗೆಗೆ ಬಂದಿದೆಯೆಂದೇ ಅರ್ಥ.
ಮೊನ್ನೆ ನೋಡಬೇಕಿತ್ತು. ಮೋಹನ್ ಜೀ ಭಾಗವತ್ ರ ಸಾರ್ವಜನಿಕ ಸಮಾರಂಭಕ್ಕೆ ಮುಖ್ಯ ಮಂತ್ರಿ ಮತ್ತವರ ಟೀಂ ಗಣವಸ್ತ್ರದೊಂದಿಗೇ ಹಾಜರ್. ಬಿಡಿ, ಸ್ವಯಂಸೇವಕರಾದವರು ಸಂಘದ ಕಾರ್ಯಕ್ರಮಕ್ಕೆ ಗಣವೇಶದಲ್ಲಿ ಬಂದರೆ ತಪ್ಪೇನಿಲ್ಲ. ಆದರೆ “ಹಾಕುವ ವೇಷ ಒಂದು ಮಾಡುವ ಕೆಲಸ ಒಂದು” ಆದ್ದರಿಂದಲೇ ತಕರಾರು. ಒಮ್ಮೆ “ಸ್ವಯಂಸೇವಕ ಅಂದರೆ ಯಾರು?” ಎಂಬ ಪತ್ರಕರ್ತನ ಪ್ರಶ್ನೆಗೆ ಸಂಘದ ಎರಡನೇ ಸರಸಂಘಚಾಲಕರಾದ ಗುರೂಜಿ ಹೀಗೆ ಉತ್ತರಿಸಿದ್ದರು.”ಸ್ವಾರ್ಥ ಬಿಟ್ಟು, ಸಮಾಜಕ್ಕೆ ಸರ್ವಸ್ವವನ್ನೂ ಅರ್ಪಿಸಿಕೊಳ್ಳುವವನು, ದೇಶಪ್ರೇಮವನ್ನೇ ಉಸಿರಾಡುವವನು, ಸೇವೆಯನ್ನೇ ಸೇವಿಸಿ ಬದುಕುವವನು ಸ್ವಯಂಸೇವಕ”ಈ ವ್ಯಾಖ್ಯಾನ ನಮ್ಮ ಸೋ ಕಾಲ್ಡ್ ಗಣವೇಷದಾರಿ ಮಂತ್ರಿ ಮಹೋದಯರಿಗೆ ಅನ್ವಯಿಸುತ್ತದಾ?
ಇಂದು ಬಿ.ಜೆ.ಪಿ ಅಧಿಕಾರದಲ್ಲಿದೆಯೆಂದರೆ ಅನೇಕ ದಶಕಗಳಿಂದ ಮೈ ಮೆತ್ತಗಾಗಿಸಿಕೊಂಡು ಸದ್ದಿಲ್ಲದೇ ದುಡಿಯುತ್ತಿದ್ದ ಅಸಂಖ್ಯ ಸ್ವಯಂಸೇವಕರು ಕಾರಣ ಎಂದರೆ ಯಾರೊಬ್ಬರೂ ಅಲ್ಲಗೆಳೆಯಲಾರರು. ತಮ್ಮ ಮನೆ, ಸಂಭಂದ ಇತ್ಯಾದಿ ಸರ್ವಸ್ವ್ ವನ್ನೂ ತೊರೆದ ಸ್ವಯಂಸೇವಕನೊಬ್ಬ ಆಸ್ಥೆಯಿಂದ ಚುನಾವಣೆ ಬಂದಾಗ ಭಾಜಪಕ್ಕೆ ಮತಹಾಕಿ ಎಂದು ಕೇಳಿದ್ದಾನೆಂದರೆ, ಭಾಜಪ ಅಧಿಕಾರಕ್ಕೆ ಬಂದರೆ ಸ್ವಯಂಸೇವಕನೋರ್ವ ಮುಖ್ಯಮಂತ್ರಿಯಾಗುತ್ತಾನೆ. ಸಂಘದಿಂದ ಮೈಗೂಡಿಸಿಕೊಂಡ ಮೌಲ್ಯಗಳಿಗೆ ಬೆಲೆಕೊಟ್ಟು ಆಡಳಿತ ನೆಡೆಸುತ್ತಾನೆ ಎಂಬ ಆಸೆಯಿಂದಲೇ. ಆದರೆ ಆ ನಂಬಿಕೆಯನ್ನು ಪ್ರತಿ ಬಾರಿಯೂ ಮಾಧ್ಯಮಗಳ ಮೂಲಕ ನಾವು ಸಂಘದ ಗರಡಿಯಿಂದಲೇ ಬಂದವರೆಂದು ಹೇಳುವ, ಗಣವೇಷದಲ್ಲೇ ಪೋಸು ನೀಡುವ ಯಾರೊಬ್ಬರಾದರೂ ಉಳಿಸಿಕೊಂಡಿದ್ದಾರಾ?
ಸುರೇಶ್ ಕುಮಾರ್, ಕಾಗೇರಿಯವರಂತಹ ಕೆಲವರನ್ನು ಬಿಟ್ಟರೆ ಯಾರು ತಾನೇ ಸಂಘ ಹೇಳಿಕೊಟ್ಟ ಮೌಲ್ಯಗಳನ್ನು ಜೊತೆಗಿಟ್ಟುಕೊಂಡಿದ್ದಾರೆ? ಪವರ್ ಕಾರ್ಪೋರೇಷನ್ ಎಂಬುದು ಟ್ರಾನ್ಸ್ ವರ್ ಕಾರ್ಪೋರೇಷನ್ ಆಗಿದೆ. ಲಕ್ಷ ಲಕ್ಷ ಹುಂಡಿಗೆ ಬೀಳದೆ ಯಾವುದೇ ವರ್ಗಾವಣೆಯೂ ನಡೆಯುತ್ತಿಲ್ಲ. ಸಾರಿಗೆ ಇಲಾಖೆಯಲ್ಲು ಹೆಜ್ಜೆ ಹೆಜ್ಜೆಗೂ ಕೈ ಚಾಚುವವರು ಸಾಲು ಸಾಲಾಗಿ ನಿಂತಿದ್ದಾರೆ. ವಿಧಾನ ಸೌಧದ ಪ್ರತಿ ಕೋಣೆಯ ಪ್ರತಿ ಟೇಬಲ್ಲಿನ ಕೆಳಗೂ ಎರಡೆರಡು ಕೈ ಗಳು ಇಣುಕಲು ಪ್ರಾರಂಭಿಸಿದೆ. ಎಲ್ಲ ಸರ್ಕಾರಗಳಿಗಿಂತ ಅತಿ ಹೆಚ್ಚು ಭ್ರಷ್ಠ ಸರ್ಕಾರ ಎಂದು ಜನ ಮೂಗುಮುರಿಯುತ್ತಿದ್ದಾರೆ. ಹೇಗಿದೆ ನೋಡಿ ಸ್ವಯಂಸೇವಕರ ಸರಕಾರ…!
ಅಷ್ಠಕ್ಕೂ ದೇಶಪ್ರೇಮ, ಸಾಮಾಜಿಕ ಕಾಳಜಿ,ಸೇವಾ ಮನೋಭಾವ, “ಪ್ರಾಮಾಣಿಕತೆ” ರಿಪೀಟ್ “ಪ್ರಾಮಾಣಿಕತೆ” ಉಳ್ಳವನು ಮಾತ್ರ ನಿಜವಾದ ಸ್ವಯಂಸೇವಕ. ಈ ಎಲ್ಲಾ ಗುಣಗಳನ್ನು ಮೆರೆದು ಸ್ವಯಂಸೇವಕ ಎಂದು ಸಾಭೀತು ಪಡಿಸಬೇಕಿದೆ. ಅದು ಭಾಗವತರ ಆಶಯ. ಅದು ಬಿಟ್ಟು ಸಂಘ ಕಲಿಸಿದ ಗುಣವನೆಲ್ಲಾ ಪಣ ಇಟ್ಟು “ಗಣವೇಷ” ತೊಟ್ಟರೇನು ಬಂತು…? ಅಲ್ವಾ…?
ಸಂಗೀತ ಕಟ್ಟಿ ಗಾಯನವೂ, ಮಾತಿನ ಮಲ್ಲರ ಹಾಸ್ಯರಸಾಯನವೂ….
ಶನಿವಾರ ಸಂಜೆಯ ಆ ಎರಡು ಘಂಟೆಗಳ ಕಾಲ ಹಿಂದೂಸ್ಥಾನಿ ಸಂಗೀತದ ವಿವಿಧ ರಾಗಗಳು ಕರ್ಣಗಳ ಒಳ ನುಸುಳಿ ಮನಸಿನಾಳಕ್ಕಿಳಿದು ಪ್ರಶಾಂತತೆಯನ್ನರಡಿ ಧ್ಯಾನದ ಉತ್ತುಂಗಕ್ಕೆ ಮನಸ್ಸನ್ನು ಒಯ್ದು ಒಂಟಿಕಾಲಿನಲ್ಲಿ ನಿಲ್ಲಿಸಿತ್ತು. ಒಟ್ಟಿನಲ್ಲಿ ಆ ಎರಡು ಘಂಟೆ ಎಲ್ಲಾ ಆಲೋಚನೆಗಳೂ ಮನಸ್ಸಿನ ಯಾವುದೋ ಮೂಲೆಯಲ್ಲಿ ಅಡಗಿ ಕುಳಿತಿದ್ದವು. ಬರೀ ಅದೇ ಧ್ಯಾನ, ಅದೇ ಆಲಾಪದ ಸ್ವರ ತರಂಗಗಳು. ಬಸವನ ಗುಡಿಯ ಗೋಖಲೆ ಇಸ್ಟಿಟ್ಯೂಟಿನ ಡಿ.ವಿ.ಜಿ ಸಂಭಾಗಣದಲ್ಲಿದ್ದ ಎಲ್ಲರನ್ನೂ ಹೀಗೆ ಸಂಗೀತದಲ್ಲಿ ಕಟ್ಟಿ ಹಾಕಿದ್ದು ಸಂಗೀತ ವಿದೂಷಿ “ಸಂಗೀತ ಕಟ್ಟಿ ಕುಲಕರ್ಣಿ” ಯವರ ಹಿಂದೂಸ್ತಾನಿ ಗಾಯನ. ಹಾಗೇ ತಾಸುಗಟ್ಟಲೆ ಮನಸ್ಸನ್ನು ಸಂಗೀತದಲ್ಲಿ ನಿಲ್ಲಿಸಿ ಮನೆ ಸೇರಿ ಕದವಿಕ್ಕಿಕೊಂಡರೂ ಅದೇ ಗಾನದ ಗುನುಗು, ಒಂದೆರಡು ಪುಸ್ತಕದ ಪುಟ ತಿರುವಿ ಹಾಸಿಗೆಯಲ್ಲಿ ಉರುಳಿದವನಿಗೆ ಕಣ್ತುಂಬ ನಿದ್ದೆ. ವೀಕೆಂಡ್ ನಲ್ಲಿ ಇದಕ್ಕಿಂತ ಇನ್ನೇನು ಬೇಕು ಹೇಳಿ.?
ಇನ್ನು ಭಾನುವಾರ ಬೆಳಗ್ಗೆ ಎದ್ದವನಿಗೆ ಎಲ್ಲ ನಿತ್ಯ ಕರ್ಮಗಳನ್ನೂ ಮುಗಿಸಿ, ಇನ್ನೊಂದು ಕಾರ್ಯಕ್ರಮಕ್ಕೆ ಹೊರಡುವ ಆತುರ. “ಅಂತರಂಗ”ದ ಹಾಸ್ಯ ಮೇಳ “ನಗುವಿಗೇಕೆ ರೇಷನ್?” ಕುತೂಹಲ ಹುಟ್ಟಿಸಿದ್ದು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ದಿಗ್ಗಜರ ಹೆಸರಿನ ಮೇಲೆ ಕಣ್ಣಾಡಿಸಿದಾಗ. ವಾರದ ಮುಂಚೆಯೇ ಸಿಕ್ಕ ಆಹ್ವಾನ ಪತ್ರಿಕೆಯ ಮೇಲೆ ಕಣ್ಣಾಡಿಸಿ, ಹಿರಣ್ಣಯ್ಯ, ಎಂಎಸ್ಎನ್, ಷಡಕ್ಷರಿ, ಗುರುರಾಜ ಕರ್ಜಗಿ, ಯಶವಂತ ಸರದೇಶಪಾಂಡೆ, ವೈ ವಿ ಗುಂಡೂರಾವ್ ಮುಂತಾದ ದಿಗ್ಗಜರ ಹೆಸರು ಓದುತ್ತಿದ್ದಂತೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೆ. ಸರಿ ಭಾನುವಾರ ಬೆಳಗಿನಿಂತ ಸಂಜೆ ಆರರ ವರೆಗೆ ಎಚ್ ಎನ್ ಕಲಾಕ್ಷೇತ್ರದಲ್ಲಿ ಕಳೆದದ್ದು ಗೊತ್ತಾಗಲೇ ಇಲ್ಲ. ಬರಿ ನಗು ನಗು ನಗು ಅಷ್ಠೇ..
ಮಾಸ್ಟರ್ ಹಿರಣ್ಣಯ್ಯನವರು ಮಾತಿಗೆ ನಿಂತರೆ ಕೇಳಬೇಕೆ? ದ.ರಾ ಬೇಂದ್ರೆ ಮತ್ತವರ ಒಡನಾಟದ ವಿವರಗಳು ಒಂದರ ಮೇಲೊಂದರಂತೆ ಬಿಚ್ಚಿಕೊಳ್ಳತೊಡಗಿತು. ಮಧ್ಯ ಮಧ್ಯ ಹಾಸ್ಯ ಪ್ರಸಂಗಗಳು ನುಸುಳಿದವು, ಯಡ್ಡಿ, ಶೋಭಾ, ರೆಡ್ಡಿ, ಶೆಟ್ಟರ್ ಬಗ್ಗೆಯೂ ಹಾಸ್ಯ ಚಾಟಾಕಿಗಳು ಸಿಡಿದು ಬಂದವು.ಕಾರ್ಯಕ್ರಮಕ್ಕೆ ವೈ.ವಿ ಗುಂಡೂರಾಯರ ಒಗ್ಗರಣೆ ಬೇರೆ. ಕೈಲಾಸಂ, ರಾಜರತ್ನಂ, ವೈ.ಎನ್.ಕೆ ಮಧ್ಯ ಮಧ್ಯ ಇಣುಕಿದರು. ಷಡಕ್ಷರಿಯವರು ಕೆಲವು ಪೋಲಿ ಜೋಕುಗಳನ್ನೂ ಹಾಗೇ ಸುಮ್ಮನೆ ತೂರಿಬಿಟ್ಟರು, ಯಶವಂತ ಸರದೇಶಪಾಂಡೆ ತಾವು ತಮ್ಮ ಟೂ ವೀಲರ್ ನಲ್ಲಿ ಹೆಣ ಸಾಗಿಸಿದ ಸಾಹಸವನ್ನು ನವಿರಾಗಿ ವಿವರಿಸಿದರು. ನಂತರ ರಿಚರ್ಡ್ ಮಾತಿಗೆ ನಿಂತದ್ದೇ ಮದುವೆ, ಮಡದಿಯ ಬಗ್ಗೆ ಕಚಗುಳಿ ಇಟ್ಟರು. ಹೆಂಡತಿ ಮತ್ತು ಪ್ರೇಯಸಿಯನ್ನು ಲ್ಯಾಂಡ್ ಲೈನ್ ಮತ್ತು ಮೊಬೈಲ್ ಗೆ ಹೋಲಿಸುತ್ತಲೇ ಒಂದು ತಾಸು ಸಭೀಕರನ್ನು ನಗೆಗಡಲಲ್ಲಿ ತೇಲಿಸಿದರು. ನಂತರ ಪುತ್ತೂರಾಯರ ವಿವೇಕಯುತ ಹಾಸ್ಯ. ಇಂದುಶ್ರೀ ಯ ಮಾತನಾಡುವ ಬೊಂಬೆಯ ಕಚಗುಳಿಗಳು ಎಲ್ಲವೂ ಸೇರಿ ನಗುವಿನ ವರ್ಷಧಾರೆಯನ್ನೇ ಹರಿಸಿತ್ತು.
ಒಟ್ಟಿನಲ್ಲಿ ಶನಿವಾರದ ಸಂಗೀತ ಸಂಜೆ, ಭಾನುವಾರದ ಹಾಸ್ಯ ಮೇಳದಿಂದ ಈ ವಾರದ ವೀಕೆಂಡ್ ಸಾರ್ಥಕವಾಯಿತು.ಅಂದಹಾಗೆ ನಿಮ್ಮ ವೀಕೆಂಡ್ ಹೇಗಿತ್ತು?
ಏನ್ ಮಗ “ವಾರಕ್ಕೊಂದೇ ಶುಕ್ರವಾರ” ಛೇ….
ವಾರಕ್ಕೆಷ್ಠು ದಿನ ಕೆಲಸ ಮಾಡ್ತೀಯಪ್ಪಾ..? ಸೋಮವಾರ ಗೊಣಗಿ ಕೊಂಡೇ ಆಫೀಸಿಗೆ ಬರ್ತೀಯಾ.. ಇನ್ನೂ ವೀಕೆಂಡ್ ಮೂಡಿನಲ್ಲೇ ಇರ್ತಿಯಾ, ಭಾನುವಾರ ರಾತ್ರಿ ಸಕತ್ ಪಾರ್ಟಿ ಆಗಿದ್ರಂತೂ ಇನ್ನೂ ಅದೇ ಹ್ಯಾಂಗೋವರ್ ಇರತ್ತೆ. ಆಕಳಿಸಿಕೊಂಡೆ ಕೀ ಬೋರ್ಡ್ ಕುಟ್ಟುತ್ತೀಯಾ. ಇನ್ನು ಮಂಗಳವಾರದಿಂದ ಗುರುವಾರ ಅಲ್ಪಸ್ವಲ್ಪ ಕೆಲಸ, ಗೆಳೆಯರೊಂದಿಗೆ ಸದಾ ಚಾಲ್ತಿಯಲ್ಲಿರುವ ಚಾಟಿಂಗು, ನಾಲ್ಕು ಟೀ ಬ್ರೇಕು, ಒಂದು ಲಂಚು, ಎರಡು ಸ್ನಾಕ್ಸ್ ಬ್ರೇಕು, ಕ್ರಿಕೆಟ್ಟು, ತ್ರೀ ಇಡಿಯಟ್ಸ್ ಫಿಲಂ, ಬಾಲಿವುಡ್ ಗಾಸಿಪ್ಸು, ಒಂದಿಷ್ಟು ರಾಜಕೀಯದ ಹರಟೆ, ಮಧ್ಯ ಮಧ್ಯ ಸ್ವಲ್ಪ ಕೆಲಸ ಇಷ್ಠರಲ್ಲೇ ಮೂರು ದಿನ ಆಗೋಗತ್ತೆ. ಮಾಡಬೇಕೆನಿಸಿದಾಗ ಮ್ಯಾನೇಜರ್ ಟೀಂ ಮೀಟಿಂಗ್ ಅಂತ ಕರಿತಾನೆ.ಹುಡುಗಿಯರತ್ತ ನೋಡುತ್ತಲೇ ಏನೇನೋ ವಿವರಿಸುತ್ತಾನೆ, ನಾವಂತೂ ತಣ್ಣಗೆ ಹೋಗಿ, ಒಂದೆರಡು ಆಕಳಿಕೆ ತೆಗೆದು, ಕೂತು ಬರೋದು. ಇಷ್ಠಾಗುವಷ್ಠರಲ್ಲಿ ಮೂರು ದಿನ ಗೊತ್ತೇ ಆಗದಂತೆ ಕಳೆದಿರುತ್ತೆ.
ಇನ್ನು ಶುಕ್ರವಾರ ಬಂದರಂತೂ ಮನಸ್ಸು ಒಂದೆಡೆ ವೀಕೆಂಡ್ ಬಂತೆಂದು ಕುಪ್ಪಳಿಸಿದರೆ, ಇನ್ನೊಂದೆಡೆ ಶುಕ್ರವಾರದ ಚೆಲುವೆಯರನ್ನು ಕಣ್ಣು ತುಂಬಿಕೊಳ್ಳಲು ಕಾತರಿಸುತ್ತಿರುತ್ತದೆ. ಎಷ್ಠೇ ಕಣ್ಣನ್ನು ಕಂಪ್ಯೂಟರ್ ಮಾನಿಟರ್ ಮೇಲೆ ನೆಟ್ಟರೂ, ಅದು ಸ್ಕಿನ್ ಟೈಟ್ ಟೀ ಶರ್ಟ್, ಜೀನ್ಸ್ ತೊಟ್ಟ ಐಟಿ ಲಲನೆಯರತ್ತಲೇ ಹೊರಳುತ್ತದೆ, ಕನಸುಗಳ ರೆಕ್ಕಿ ಬಿಚ್ಚಿ ನೀಲಿಯಾಕಾಶಕ್ಕೆ ಹಾರುತ್ತಾ, ಪ್ರಣಯ ಗೀತೆ ಗುನುಗುತ್ತದೆ. ಯಾರೆಷ್ಟು ಚೆಲುವೆ ಎಂದು ಮನಸು ತೀರ್ಪು ನೀಡುವ ಮೊದಲೇ ಶುಕ್ರವಾರವೂ ಕಳೆಯುತ್ತದೆ. ಮತ್ತದೇ ವೀಕೆಂಡು, ಮಧ್ಯಾಹ್ನದ ತನಕ ನಿದ್ರೆ, ಮ್ಯಾಟ್ನಿ ಪಿವಿಆರ್ ಪಿಚ್ಚರ್ರು, ಸಂಜೆ ಮತ್ತೆ ಪೋರಂ ಮುಂದೆ ಬಾಯಿಬಿಟ್ಟುಕೊಂಡು ನಾರ್ತ್ ಇಂಡಿಯನ್ ಹುಡುಗಿಯರನ್ನು ಗುರಾಯಿಸುವ ಚಾಳಿ, ರಾತ್ರಿಯಾಯಿತೆಂದರೆ ಬುಸ್ ನೊರೆಯೊಂದಿಗೆ ಜಿನುಗುವ ಬೀರು, ಚಿಪ್ಸು, ಇಡೀ ವಾರ ನೋಡಿದ ಹುಡುಗಿಯರ ತಳುಕು ಬಳುಕಿನ ಬಗ್ಗೆ ಕಾಮೆಂಟು. ಯಾರು ಯಾರನ್ನ ಪಟಾಯಿಸಿದರು, ಕಾಫಿ ಡೇ ನಲ್ಲಿ ಯಾರು ಯಾರೊಂದಿಗೆ ಮಾತಿಗೆ ಕುಳಿತಿದ್ದರು. ಕೈ ಕಾಲುಗಳು ಹೇಗೆಲ್ಲಾ ಹೊರಳುತ್ತಿದ್ದವು, ಅವನು ಅವಳಿಗೇನು ಗಿಫ್ಟ್ ಕೊಟ್ಟಾ, ಅವಳೇಗೆ ಅವನತ್ತ ಕಣ್ಣು ಮಿಟುಕಿಸಿದಳು, ಇವುಗಳ ಬಗ್ಗೆಯೇ ಮಾತು. ತಡ ರಾತ್ರಿಯವರೆಗೂ ವಿ ಚಾನಲ್ ಗೆ ಸೆಟ್ ಆದ ಟಿವಿ ಚಾಲ್ತಿಯಲ್ಲಿರುತ್ತದೆ. ನಂತರ ಎಲ್ಲಿದ್ದೇವೋ, ಹೇಗಿದ್ದೇವೋ ಎನ್ನುವ ಪರಿವೇ ಇಲ್ಲದಷ್ಟು ನಶೆಯೇರಿ ಅಡ್ಡಾದಿಡ್ಡಿಯಾಗಿ ಹೊರಳಾಟ.. ಇಷ್ಠೇ ತಾನೇ ಅನೇಕ ಐಟಿ ಹುಡುಗರ ವಾರದ ದಿನಚರಿ. ಇಷ್ಠೇ ತಾನೇ ಐಟಿ ಲೈಫು?
ವಾರದ ನಾಲ್ಕು ದಿನ ತುಂಬಾ ಬೋರು ಮಗ. ಶುಕ್ರವಾರದ ಮಜಾನೇ ಬೇರೆ. ಆದರೆ ವಾರಕ್ಕೊಂದೇ ಶುಕ್ರವಾರ ಛೇ…? ಅಲ್ವ ಎಂದ ಗೆಳೆಯ. ಒಪ್ಪಿಕೊಳ್ಳದಿರಲು ಮನಸಾಗಲಿಲ್ಲ.”ಛೇ ವಾರಕ್ಕೊಂದೇ ಶುಕ್ರವಾರ” ಎಂಬುದು ಎಲ್ಲಾ ಐಟಿ ಹುಡುಗರ ಮನದಾಳದ ಮಾತು ಎಂಬುದರಲ್ಲಿ ಎರಡು ಮಾತಿಲ್ಲ.
ಲವ್ ಲೆಟರ್ ಇಲ್ಲದ ಲವ್ವಲ್ಲೆಲ್ಲಿದೆ “ಲವ್”ಲವಿಕೆ….?
“ಮೈಎಲ್ಲಾ ಬಣ್ಣವಾಗಿಸಿಕೊಂಡು, ಭಾಗಿ ನಿಂತು ಕಣ್ಣು ಹೊಡೆದ ಕಾಮನ ಬಿಲ್ಲಿಗೂ ನಾನು ಮನಸೋಲಲಿಲ್ಲ.. ಆದರೆ ಆ ನಿನ್ನ ಕುಡಿ ನೋಟಕ್ಕೇ ಮಾರು ಹೋದೆನಲ್ಲಾ..” ಅಂತಾಗಲೀ, “ಎಷ್ಠೋ ಹುಡುಗಿಯರ ನೋಡಿದರೂ ನಿನ್ನಲೇನೋ ಸೆಳೆತ, ಮನದಲೇನೋ ಮಿಡಿತ, ಇದು ಯಾವುದೋ ಜನ್ಮದ ಖುಣ ಖಂಡಿತ.”. ಎಂತಲೋ.. ಅಥವಾ ಇನ್ಯಾವುದೋ ಹಳೆಯ ಪ್ರೇಮಗೀತೆಯ ಸಾಲನ್ನೇ ಮುನ್ನುಡಿಯಾಗಿಸಿ, ಪುಟಗಟ್ಟಲೆ ಬರೆದು “ನೀನು ಕಡಲು ನಾನು ತೀರ, ನೀನು ಬಳ್ಳಿ ನಾನು ಮರ” ಎಂದೆಲ್ಲಾ ಕಾಗದ ತುಂಬಿಸಿ, ಎಷ್ಟು ಬರೆದರೂ ಕಡಿಮೆಯೇನೋ ಎಂದು ಕಳವಳಿಸುತ್ತಲೇ ಚಡಪಡಿಸಿ, ಕೊಂಚ ಚಿತ್ ಆದರೂ ಬೇರೆ ಕಾಗದ ತೆಗೆದುಕೊಂಡು ಪುನಹಃ ಅಕ್ಷರ ಪೋಣಿಸಿ, ಚಿತ್ರಗಳಿಂದ ಸಿಂಗರಿಸಿ, ಜೋಪಾನವಾಗಿ ಕವರ್ನಲ್ಲಿ ಸೇರಿಸಿ, ಕೊನೆಗೊಮ್ಮೆ ಚುಂಬಿಸಿ ಕಳುಹಿಸುತ್ತಿದ್ದ ಪ್ರೇಮಪತ್ರವನ್ನು ನನ್ನ ಜೆನೆರೇಶನ್ ನವರು ಖಂಡಿತ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಬಿಡಿ.
ಪ್ರೀತಿಸಿದ ಇಬ್ಬರಿಗೆ ಪತ್ರಗಳನ್ನು ತಲುಪಿಸಲೆಂದೇ ಮೂರನೆಯವನು ಬೇಕಾಗಿದ್ದ ಕಾಲವದು. ಒಂದೋ ಯುವಕನ ಸ್ನೇಹಿತ ಅಥವಾ ಯುವತಿಯ ಸ್ನೇಹಿತೆ ಈ ಮೆಸೆಂಜರ್ ಗಳಾಗಿ ಬಿಡುತ್ತಿದ್ದರು. ಬಹುಶಃ ಇಂತಹ ಮೂರನೆಯ ಕೊಂಡಿಗಳಿಂದಲೇ ಎಷ್ಠೋ ಪ್ರೇಮ ಬೆಸೆದುಕೊಂಡಿವೆ ಮತ್ತು ಮುರಿದು ಬಿದ್ದಿವೆ ಕೂಡ. ಆಗಿನ ಕಾಲದ ಲವ್ ನೆನೆಸಿಕೊಂಡರೆ ಒಮ್ಮೊಮ್ಮೆ ನಗುಬರುತ್ತದೆ. ಪಕ್ಕದ ಮನೆ ಹುಡುಗಿಗೆ ಕೂಡ ಪ್ರೇಮ ಸಂದೇಶ ತಲುಪುತ್ತಿದ್ದದ್ದು ಪತ್ರಗಳಿಂದಲೇ. ಇನ್ನು ಕೆಲವು ದಿನ ಪ್ರೇಮಿಸಿ, ನಂತರ ಯಾವುದೋ ಕಾರಣಕ್ಕೆ ಊರುಬಿಟ್ಟವರಿಗಂತೂ ಸೇತುವೆಯಾಗುತ್ತಿದ್ದದ್ದೇ ಪತ್ರಗಳು. ಆ ಕಾತುರತೆಯಾದರೂ ಎಷ್ಟು ಚೆಂದವಿತ್ತು. ಪತ್ರ ಬರುತ್ತದೆಂದು ಕಾಯುವುದು, ಪತ್ರ ಬರದಿದ್ದರೆ ಹಳೆಯ ಪತ್ರವನ್ನೇ ಪುನಃ ಪುನಃ ಓದಿ ಎದೆಗೊತ್ತಿಕೊಂಡು ಧ್ಯಾನಿಸುವುದು. ಯಾರೋ ನೋಡಿದರೆಂಬಂತಾಗಿ ಬೆಚ್ಚಿ ಪತ್ರವನ್ನು ಧಾವಣಿಯಿಂದ ಮುಚ್ಚಿಟ್ಟುಕೊಳ್ಳುವುದು.
ಬಿಡಿ, ಈಗೇನಿದ್ದರು ಪೋನು, ಎಸ್.ಎಂಎಸ್, ಇಂಟರ್ನೆಟ್ಟು, ಚಾಟು ಇವುಗಳೇ. ಪರಿಕ್ಷೇಗಳಲ್ಲೇ ಪ್ರಶ್ನೆಗಳಿಗೆ ಧೀರ್ಘವಾಗಿ ಉತ್ತರ ಬರೆಯಲು ಮೂಗುಮುರಿಯುವ(ಆದ್ದರಿಂದಲೇ ಆಬ್ಜೆಕ್ಟೀವ್ ಟೈಪ್ ಬಂದಿದೆ) ನಾವು ಪುಟಗಟ್ಟಲೆ ಪ್ರೇಮ ಪತ್ರ ಬರೆಯುವುದು ದೂರದ ಮಾತೇ.ಆದರೂ ಪ್ರೇಮ ಪತ್ರದಲ್ಲಿರುತ್ತಿದ್ದ ಸಂವೇದನೆ, ಕಾತುರ, ಲವಲವಿಕೆ, ಹುಡುಗಿಯನ್ನು ಮೆಚ್ಚಿಸಬೇಕೆಂದು ಕವಿಯಾಗುವ ತೆವಲು, ಹುಡುಗನನ್ನು ಕಾಡಿಸಲೆಂದೇ ಲೇಪಿಸುವ ಕೋಪ ಎಲ್ಲವೂ ಈ ಚಾಟಿಂಗ್ ಯುಗದಲ್ಲಿ ಮಾಯ.
ಮೊನ್ನೆ ಸಿಕ್ಕ ಸ್ನೇಹಿತನೊಬ್ಬ ತನ್ನ ಪ್ರೀತಿಯ ಬಗ್ಗೆ ಜಂಬಕೊಚ್ಚಿಕೊಳ್ಳುತ್ತಿದ್ದ. ಲಿಫ್ಟಿನಲ್ಲಿ ನಕ್ಕ ಹುಡುಗಿಗೆ ಕಾಫೀಡೇ ನಲ್ಲಿ ಪ್ರಪೋಸ್ ಮಾಡಿ, ಲಾಲ್ ಬಾಗ್ ಸುತ್ತಿದ ಸಾಹಸ(?) ಅವನೇಳುತ್ತಿದ್ದರೆ.ನನಗೆ ಹೊಟ್ಟೇ ಕಿಚ್ಚಾಗುತ್ತಿದೆ ಎಂದು ಅವನು ಭಾವಿಸಿದ್ದ ಹಾಗಿತ್ತು. ಆದರೆ ನನಗಂತೂ ನನ್ನ ವಾರಗೆಯ ಸ್ನೇಹಿತರ ಲವ್ ಲೆಟರ್ ಇಲ್ಲದ ಲವ್ವಿನಲ್ಲಿ ಲವಲವಿಕೆ ಕಳೆದುಹೋಗಿದೆ ಎನ್ನಿಸುತ್ತಿತ್ತು….. ಕವಿಯಾಗಿ ಕವಿತೆ ಬರೆಯದೆ, ಪ್ರೀತಿಸಿದವಳ ಹೆಸರ ಕನವರಿಸದೆ, ಕೋಪಿಸಿಕೊಂಡು ಕಾಡದೆ,ಗಾಳಿಯಲ್ಲೇ ಚುಂಬನ ರವಾನಿಸದೆ, ಪೇಮ ಪತ್ರ ಬರೆದು ಎದೆಗೊತ್ತಿಕೊಳ್ಳದೆ ಇದ್ದರೆ ಅದೆಂತಾ ಪ್ರೇಮಾ ರೀ?
ಅಮ್ಮನಿಂದ ಇಡ್ಲಿ ಕಲಿತು ಇಡೀ ಜಗತ್ತಿಗೇ ಇಡ್ಲಿ ರುಚಿ ಹತ್ತಿಸುತ್ತಿರುವ ಕಾಮತ್ …
ಅವರ ಬಗ್ಗೆ ತಿಳಿದುಕೊಂಡ ದಿನದಿಂದ ನಾನು ವಿಠ್ಠಲ ವೆಂಕಟೇಶ ಕಾಮತ್ ರ ಅಭಿಮಾನಿಯಾಗಿ ಬಿಟ್ಟಿದ್ದೇನೆ. ಅಗಾಧ ಕನಸುಗಳನ್ನು ಹೊಂದಿದ ಯುವಕನೊಬ್ಬ ಶ್ರದ್ದೆ, ಪರಿಶ್ರಮ, ಮತ್ತು ನಿಷ್ಠೆ ಇಟ್ಟುಕೊಂಡು ಬೆಳೆಯಬಲ್ಲ ಎಂಬುದಕ್ಕೆ ತಾಜಾ ಉದಾಹರಣೆ ವಿಠಲ ಕಾಮತ್. ಓದಿದ್ದು ಇಂಜಿನಿಯರಿಂಗ್ ಕೈ ಹಿಡಿದದ್ದು ಹೋಟೆಲ್ ಉದ್ಯಮ. ಮುಂದಿದ್ದದ್ದು ಜಗತ್ತೇ ನನ್ನತ್ತ ನೋಡಬೇಕೆಂಬ ಕನಸು. ಕನಸಿನ ಸಾಕಾರಕ್ಕೆ ಮುನ್ನೆಡೆದಾಗ ಸವೆಸಿದ್ದು ಕಲ್ಲು ಮುಳ್ಳುಗಳ ಬಹು ಕಷ್ಠಕರ ಹಾದಿ. ಒಮ್ಮೆ ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಆತ್ಮ ಹತ್ಯೆ ಮಾಡಿಕೊಳ್ಳುವುದೊಂದೇ ಮಾರ್ಗ ಎಂದು ತೀರ್ಮಾನಿಸಿದ್ದರೆಂತೆ ಕಾಮತ್. ಬಿಡಿ ಅವರೊಳಗಿದ್ದ ಛಲ ಅವರನ್ನು ಬದುಕಿಸಿತು, ಕನಸಿನ ಕಾಲುವೇ ಈಜುವಂತೆ ಮಾಡಿ, ದಡಸೇರಲು ಅನುವುಮಾಡಿತು. ಇಂದು ಅವರ ಹೋಟೆಲ್ ಅನೇಕ ದೇಶದಲ್ಲಿ ತೆರೆದುಕೊಂಡಿದೆ. ರಾಷ್ಠ್ರೀಯ ಮತ್ತು ಅಂತರಾಷ್ಠ್ರೀಯ ಪ್ರಶಸ್ತಿಯನ್ನು ಭಾಚಿಕೊಂಡಿದೆ. ಅಂದಹಾಗೆ ಆ ಹೋಟೆಲ್ ನ ಹೆಸರು “ಆರ್ಕಿಡ್”.
ಬಹಶಃ ನಮ್ಮಮ್ಮನಂತೆ ಇಡ್ಲಿ ಮಾಡುವವರು ಯಾರೂ ಇಲ್ಲವೇನೋ. ಅಷ್ಠು ಚೆನ್ನಾಗಿ ನನ್ನಮ್ಮ ಇಡ್ಲಿ ಮಾಡುತ್ತಿದ್ದರು. ಅನೇಕ ಬಂಧುಗಳು ಇಡ್ಲಿ ತಿನ್ನಬೇಕೆನಿಸಿದಾಗ ನಮ್ಮ ಮನೆಗೆ ಹಾಜರಾಗಿ ಬಿಡುತ್ತಿದ್ದರು. ನನ್ನಮ್ಮನಿಂದ ನಾನು ಇಡ್ಲಿ ಮಾಡುವುದನ್ನು ಕಲಿತೆ. ಆ ಇಡ್ಲಿ ನನಗೆ ಹಣ ಮಾಡುವುದನ್ನು ಕಲಿಸಿತು.ಜಗತ್ತಿನ ಮೂಲೆ ಮೂಲೆಗಳಲ್ಲಿ ನಾನು ಇಡ್ಲಿಯನ್ನು ಹೆಸರುವಾಸಿ ಮಾಡಿದ್ದೇನೆ. ಯುರೋಪ್ ನಲ್ಲಂತೂ ಇಡ್ಲಿಯನ್ನು ರೈಸ್ ಪುಡಿಂಗ್ ಹಾಗೂ ಚಟ್ನಿಯನ್ನು ಕೋಕನೆಟ್ ಸಾಸ್ ಎಂದು ಹೇಳೆ ಮಾರಿದ್ದೇನೆ. ನಮ್ಮ ಕಾಮತರನ್ನು ಎಲ್ಲರೂ ಇಡ್ಲಿ-ವಡಾ-ಸಾಂಬಾರ್ ಮಾರುವವರು ಎಂದು ಹಾಸ್ಯ ಮಾಡುತ್ತಾರೆ. ಆದರೆ ಈ ಇಡ್ಲಿಯಿಂದಲೇ ನಾನು ಜಗತ್ತನ್ನೆಲ್ಲಾ ಸುತ್ತಿ ಬಂದಿದ್ದೇನೆ. ಇಂತಹ ಇಡ್ಲಿಯ ಉಪಕಾರ ನಾನೆಂದೂ ಮರೆಯುವುದಿಲ್ಲ.
ದೊಡ್ಡ ಹೋಟೆಲ್ ನ ಮಾಲೀಕ ನಾಗಬೇಕೆಂಬ ಕನಸು ಮೊಳಕೆಯೊಡೆದ ಬಗ್ಗೆ ಕಾಮತರು ಹೇಳುವುದು ಹೀಗೆ…
ಮುಂಬೈ ನ ಓಬೇರಾಯ್ ಶರಟನ್ ಕಟ್ಟಡದ ಕೆಲಸ ವೀಕ್ಷಿಸಲು ಓಬೇರಾಯ್ ಬಂದಿದ್ದಾರೆಂದು ತಿಳಿಯಿತು. ಹಿಂದೂ ಮುಂದೂ ಯೋಚಿಸದೆ ಕಾಲಿಗೆ ಚಪ್ಪಲಿ ಸಿಕ್ಕಿಸಿ ಆ ಸ್ಥಳದತ್ತ ಓಡತೊಡಗಿದೆ. ನನಗೂ ಅವರಿಗೂ ಯಾವುದೇ ಸಂಭಂದವಾಗಲೀ ಪರಿಚಯವಾಗಲೀ ಇರಲಿಲ್ಲ. ಇದ್ದ ಒಂದೇ ಸಂಬಂಧವೆಂದರೆ ನಾನು ಯಾವ ಕ್ಷೇತ್ರದಲ್ಲಿ ಹೊಸಬನಾಗಿ ದಡ ಮುಟ್ಟಲು ಕಷ್ಟ ಪಡುತ್ತಿದ್ದೆನೋ ಅವರು ಅದೇ ಕ್ಷೇತ್ರದ ಬಾದಶಾಹ್ ಆಗಿದ್ದರು. ಧಾವಿಸಿ ಬಂದ ನನ್ನ ಕಾಲಲ್ಲಿ ಕೊಲ್ಹಾಪುರಿ ಚಪ್ಪಲಿ, ಮೈಮೇಲೇ ಸಾಧಾರಣ ಬಟ್ಟೇ. ಗಾಳಿಗೆ ಅಸ್ತವ್ಯಸ್ತವಾದ ಕೂದಲು, ಏದುಸಿರು… ವಾಚ್ ಮನ್ ಒಳಬಿಡಲೂ ಸಹ ಅನುಮಾನಿಸಿದ. ಓಬೇರಾಯ್ ರನ್ನು ಕಂಡು ನಮಸ್ಕರಿಸಿ, ನನ್ನ ಪುಟ್ಟ ಹೋಟೆಲ್ ಬಗ್ಗೆ ಹೇಳಿದೆ. ಆಸ್ಥೆಯಿಂದಲೇ ಕೇಳಿದರು. ಜೀವನದಲ್ಲಿ ಏನಾಗಬೇಕೆಂದಿದ್ದೀಯಾ? ಎಂದು ಕೇಳಿದರು. ಅವರ ಕಣ್ಣಲ್ಲಿ ಕಣ್ಣಿಟ್ಟು ಹೇಳಿದೆ. ನಾನೂ ನಿಮ್ಮಂತೆಯೇ ದೊಡ್ಡ ಹೋಟೆಲ್ ಮಾಲಿಕನಾಗ್ತೀನಿ ಎಂದೆ. ಯಾಕಗಬಾರದು? ಖಂಡಿತ ಆಗು ಎಂದು ಬೆನ್ನು ಚಪ್ಪರಿಸಿ ಕಳುಹಿಸಿದರು.ನನ್ನ ಹೋಟೆಲ್ ಆರ್ಕಿಡ್ ಪ್ರಾರಂಭವಾದ ನಂತರ ಮತ್ತೊಮ್ಮೆ ಅವರನ್ನು ಭೇಟಿಯಾಗಲು ಹೋಗಿದ್ದೆ. ಸ್ವತಹ ಓಬೇರಾಯ ಬಾಚಿ ತಬ್ಬಿಕೊಂಡು ನಿನ್ನನ್ನು ಮರೆಯುವುದುಂಟೆ. ಅಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ನಿನ್ನ ಕನಸು ಹೇಳಿಕೊಂಡವನು ನೀನು. ನಿನ್ನ ಸಾಧನೆ ಖುಷಿತಂದಿದೆ ಎಂದರು. ಆಗ ನನಗೆ ಸಮಾಧಾನವಾಗಿದ್ದು.
ತಮ್ಮ ಯಶಸ್ಸಿನ ಬಗ್ಗೆ ಬರೆಯುವ ಕಾಮತ್. ಒಂದು ಗುಟ್ಟನ್ನು ಸಹ ಬಿಟ್ಟುಕೊಟ್ಟಿದ್ದಾರೆ. ಯಶಸ್ಸು ಹೊಂದಲು “ಡಿಟರ್ಮಿನೇಷನ್, ಡೆಡಿಕೇಶನ್, ಹಾಗೂ ಡಿಸಿಪ್ಲೀನ್” ಅನ್ನುವ ಮೂರು ಗುಣಗಳು ನಮ್ಮಲ್ಲಿರಬೇಕು. ಈ ಮೂರು ಡಿ ಗಳ ಜೊತೆ“ಡೆಸ್ಟಿನಿ” ಯೊಂದು ನಮ್ಮೊಂದಿಗಿದ್ದರೆ ಯಶಸ್ಸು ಎಂದಿಗೂ ನಮ್ಮದೇ ಎನ್ನುತ್ತಾರೆ ವಿಠ್ಠಲ ಕಾಮತ್.
ಆ ಮೂರು ಡಿ ಗಳ ಮಹತ್ವವನ್ನು ನಾವು ಅರಿತುಕೊಳ್ಳಬೇಕಲ್ಲವೇ?
ಬೇಕಾದರೆ ಪ್ರಯತ್ನಿಸಿ ನೋಡಿ, ಈ ಜನಸಂತನ ಕಹಿಮಾತ್ರೆ ಜೀವನವನ್ನು ಸೂಧಾರಿಸೀತೂ…
ಅವರ ಹೆಸರು ಮುನಿಶ್ರೀ ತರುಣಸಾಗರ. ಹುಟ್ಟುಡುಗೆಯ ಈ ಜೈನಸಂತ ಮಾತಿಗಿಳಿದರೆ ಭೂಮಿಯೇ ಕಂಪಿಸಿದ ಅನುಭವಾಗುತ್ತದೆ.ಇಂದು ಇವರು ಕೇವಲ ಜೈನಸಂತರಾಗಿ ಉಳಿದಿಲ್ಲ. ಇದೀಗ ಈತ ಎಲ್ಲರೂ ಇಷ್ಠ ಪಡುವ ಜನಸಂತ. ಸಂತ ತರುಣಸಾಗರ್ ದಿಗಂಬರ ದೀಕ್ಷೆ ತೆಗೆದುಕೊಂಡದ್ದು ತನ್ನ ೧೩ ನೇ ವಯಸ್ಸಿನಲ್ಲಿ. ನಂತರ ಪ್ರಾರಂಭವಾಗಿದ್ದು ಸಾರ್ವಜನಿಕ ಜೀವನ. ತರುಣಸಾಗರರ ಪ್ರವಚನವೆಂದರೆ ಲಕ್ಷಾಂತರ ಜನರ ಕಿವಿ ನೆಟ್ಟಗಾಗುತ್ತದೆ. ಎಲ್ಲರೂ ಈ ಜನಸಂತನ ಮಾತಿಗೆ ಕಿವಿ ಕೊಟ್ಟು ಕುಳಿತುಬಿಡುತ್ತಾರೆ. ಸಮಾಜ ಸುಧಾರಣೆಗೆ, ಜೀವನ ಸುಧಾರಣೆಗೆ ಈತನ ಕಹಿ ಮಾತ್ರೆ ನಿಜಕ್ಕೂ ಅತ್ಯವಶ್ಯಕ.
ನಾನು ಅನೇಕರೊಂದಿಗೆ ಈ ಸಂತನ ಬಗ್ಗೆ ಪ್ರಸ್ಥಾಪಿಸಿದ್ದೇನೆ. ಏಕೋ ಗೊತ್ತಿಲ್ಲ ಈತನ ಬಗ್ಗೆ ವಿಶೇಷ ಆಸ್ಥೆ ಗೌರವ ನನಗೆ. ಮನೆಯಲ್ಲಿ ಸ್ನೇಹಿತರು ಬಂದಾಗ, ನೆಂಟರು ಎದುರು ಕುಳಿತಾಗ, ಪರಿಚಯಸ್ಥರು ಮಾತಿಗೆ ಕುತಾಗ, ಬೇಕಂತಲೇ ಇವರ ಕಹಿ ಮಾತ್ರೆಗಳ ಪುಸ್ತಕವನ್ನು ಟೇಬಲ್ಲಿನ ಮೇಲಿಡುತ್ತೇನೆ. ಒಬ್ಬಿಬ್ಬರಾದರೂ ಪುಸ್ತಕ ಹೊಕ್ಕು ಕಣ್ಣಾಡಿಸಿದರೆ ಅಷ್ಠರ ಮಟ್ಟಿಗೆ ನನ್ನಲ್ಲಿ ಸಾರ್ಥಕ ಭಾವ ಮೂಡುತ್ತದೆ. ಹೀಗೆ ನಾಲ್ಕಾರು ಕಹಿ ಮಾತ್ರೆಗಳನ್ನು ಅದರಿಂದ ಹೆಕ್ಕಿ ನಿಮ್ಮ ಮುಂದಿಡುತ್ತಿದ್ದೇನೆ.ಈ ವಿಚಾರವನ್ನು ಓದಿಕೊಳ್ಳುವ, ಜೀರ್ಣಿಸಿಕೊಳ್ಳುವ ಮತ್ತು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಇಚ್ಚೆಯನ್ನು ನಿಮಗೇ ಬಿಡುತ್ತೇನೆ. ಇಷ್ಠವಾದರೇ ಅಭಿಪ್ರಾಯ ತಿಳಿಸಿ…
ನಿಮ್ಮ ಮಕ್ಕಳಿಗೆ ನೀವು ತಂದೆ-ತಾಯಿಗಳಾಗಿರುವುದರಿಂದ ಅವರನ್ನು ನೀವು ಚೆನ್ನಾಗಿ ಓದಿಸಿ-ಬರೆಸಿ ಅರ್ಹರನ್ನಾಗಿ ಮಾಡಬೇಕು.ಆದರೆ ಅವರನ್ನು ಅತಿ ಅರ್ಹರನ್ನಾಗಿಯೂ ಮಾಡಬಾರದು. ಯಾಕೆಂದರೆ ನಾಳೆ ಅವರು ನಿಮ್ಮನ್ನು “ಅನರ್ಹ” ರೆಂದು ತಿಳಿಯಬಾರದು.
ಸಂಪತ್ತು ಪುಣ್ಯದಿಂದ ಸಿಗುತ್ತದೆ. ಪರಿಶ್ರಮದಿಂದ ಸಿಗುವುದಾದರೆ ಕಾರ್ಮಿಕರ ಬಳಿ ಯಾಕಿಲ್ಲ? ಬುದ್ದಿಯಿಂದ ಸಿಗುವುದಾದರೆ ಪಂಡಿತರಲ್ಲಿ ಏಕಿಲ್ಲಾ?ಜೀವನದಲ್ಲಿ ಒಳ್ಳೆಯ ಮಕ್ಕಳು, ಸಂಪತ್ತು, ಮತ್ತು ಸಫಲತೆ ಪುಣ್ಯದಿಂದ ಸಿಗುತ್ತದೆ.
ಸಂತರು ಹಸುವಿನ ಹಾಗೆ ಇರಬೇಕೇ ವಿನಹಃ ಆನೆಯ ಹಾಗಲ್ಲ. ಹಸು ಹುಲ್ಲು ತಿಂದರೂ ತುಪ್ಪ, ಹಾಲು, ಬೆಣ್ಣೆ, ಹಾಗೂ ಮಜ್ಜಿಗೆಯನ್ನು ನೀಡುತ್ತದೆ.ಆದರೆ ಆನೆ ಕಬ್ಬು,ಬೆಲ್ಲ ಏನೆಲ್ಲಾ ತಿಂದರೂ ಅದರಿಂದ ಸಮಾಜಕ್ಕೆ ಲಾಭವಿಲ್ಲ. ಯಾರು ಸಮಾಜದಿಂದ ಬೊಗಸೆಯಷ್ಠು ಪಡೆದು ಮೊರ ತುಂಬಿ ಹಿಂದಿರುಗಿಸುತ್ತಾರೋ ಅವರೇ ಸಂತರು-ಮುನಿಗಳು.
ಜಗತ್ತಿನಲ್ಲಿ ನೀವು ಮರೆಯಬೇಕಾದ ಎರಡು ಸಂಗತಿಗಳಿವೆ, ಒಂದು- ನೀವು ಯಾರಿಗಾದರೂ ಒಳ್ಳೆಯದನ್ನು ಮಾಡಿದ್ದರೆ ಅದನ್ನು ಕೂಡಲೇ ಮರೆತುಬಿಡಿ.ಎರಡು- ಯಾರಾದರೂ ನಿಮಗೆ ಕೆಟ್ಟದ್ದನ್ನು ಮಾಡಿದ್ದರೆ ಅದನ್ನೂ ಸಹ ಕೂಡಲೇ ಮರೆತುಬಿಡಿ.
ಸಾವು ಎರಡು ಮಾತುಗಳ ಬಗ್ಗೆ ನಗುತ್ತದೆ. ಒಂದು- ರೋಗಿಗೆ ವೈದ್ಯರು “ನಾನಿದ್ದೇನಲ್ಲ, ನೀನು ನಿಶ್ಚಿಂತನಾಗಿರು” ಎಂಬ ಮಾತಿಗೆ. ಮತ್ತೊಂದು ಯಾರಾದರೂ ಸತ್ತಾಗ ಇನ್ನುಳಿದವರು “ಅಯ್ಯೋ ಪಾಪ ಹೊರಟು ಹೋದ” ಎನ್ನುವ ಮಾತಿಗೆ. ಸಾವಿನ ಕ್ಯೂನಲ್ಲಿ ಇರದವರು ಇಲ್ಲಿ ಯಾರಿದ್ದಾರೆ ಹೇಳಿ?
ನಾಯಿ ಸುಸಂಸ್ಕೃತ ಸಮಾಜದಲ್ಲಿ ಬಹಳ ವೇಗವಾಗಿ ಓಡುತ್ತಲಿದೆ. ಈ ಮೊದಲು ಜನರು ಹಸುವನ್ನು ಸಾಕುತ್ತಿದ್ದರು. ಈಗ ನಾಯಿಯನ್ನು ಸಾಕುತ್ತಾರೆ.ಒಂದು ಕಾಲದಲ್ಲಿ ನಮ್ಮ ಮನೆಯ ಮುಂದೆ “ಅತಿಥಿ ದೇವೋ ಭವ” ಎಂದು ಬರೆಯುತ್ತಿದ್ದರು ಈಗ “ನಾಯಿ ಇದೆ ಎಚ್ಚರಿಕೆ” ಎಂದು ಬರೆಯುತ್ತಿದ್ದಾರೆ.
ಮನುಷ್ಯ ಜಾತಿಯಲ್ಲಿ ಎರಡು ಹಳೆಯ ಕೆಟ್ಟ ಚಟಗಳಿವೆ. ಒಂದು – ಚಾಡಿ ಹೇಳುವುದು. ಇನ್ನೊಂದು- ಕಣ್ಣು ಹೊಡೆಯುವುದು. ಮಹಿಳೆಯರು ಚಾಡಿ ಹೇಳುವುದನ್ನು,ಪುರುಷರು ಕಣ್ಣು ಹೊಡೆಯುವುದನ್ನು ನಿಲ್ಲಿಸಿದರೆ ಜೀವನದಲ್ಲಿ ಮತ್ತು ಸಮಾಜದಲ್ಲಿ ಅರ್ಧದಷ್ಠು ಸಂಘರ್ಷಗಳು ಇಲ್ಲದಂತಾಗುತ್ತದೆ.
ಸತ್ತವನು ಸ್ವರ್ಗ ಸೇರಿದನೋ ಇಲ್ಲವೇ ನರಕ ಸೇರಿದನೋ? ಇದನ್ನು ತಿಳಿಯಲು ಯಾವುದೇ ಸಂತ ಇಲ್ಲವೇ ಜ್ಯೋತಿಷಿಯ ಬಳಿಗೆ ಹೋಗಬೇಕಿಲ್ಲ.ಆತನ ಶವಯಾತ್ರೆಯಲ್ಲಿ ಜನರಾಡುವ ಮಾತುಗಳನ್ನು ಗಮನವಿಟ್ಟು ಕೇಳಿ. ನಿಮಗೇ ಅರ್ಥವಾಗುತ್ತದೆ.
ನೀವು ಮನೆಯ ಹೊರಗೆ ವೈದ್ಯ, ವಕೀಲ, ವ್ಯಾಪಾರಿ ಹಾಗು ಬುದ್ದಿಜೀವಿಗಳಾಗಿರಿ. ಆದರೆ ಸಾಯಂಕಾಲ ಮನೆಗೆ ಬಂದಾಗ ನಿಮ್ಮ ವೃತ್ತಿಯನ್ನು ಹೊರಗೆ ಬಿಟ್ಟು ಮನೆಯನ್ನು ಪ್ರವೇಶಿಸಿ. ಅಲ್ಲಿ ಒಬ್ಬ ತಾಯಿಗೆ ಮಗನ, ಪತ್ನಿಗೆ ಪತಿಯ, ಮಕ್ಕಳಿಗೆ ತಮ್ಮ ತಂದೆಯ ನೀರಿಕ್ಷಣೆ ಇದೆ ಅದನ್ನು ಮರೆಯಬೇಡಿ.
ಇನ್ನೂ ಇಂತಹ ಮಾತ್ರೆಗಳು ಬಹಳಷ್ಠಿವೆ… ತಿಳಿಯುವ ಕುತೂಹಲವಿದ್ದರೆ ಒಂದು ಈ ಮೈಲ್ ಮಾಡಿ.. ನಾನು ಆಸ್ಥೆಯಿಂದ ತೆಗೆದಿಟ್ಟುಕೊಂಡ ಮತ್ತಷ್ಠು ಮಾತ್ರೆಗಳನ್ನು ಕೊಡುತ್ತೇನೆ..


























